ಕಲಬುರಗಿ: ಕಂದಾಯ ಇಲಾಖೆಯು ಸರ್ಕಾರದ ಮಾತೃ ಇಲಾಖೆಯಾಗಿದ್ದು, ಇಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಸಹ ಮಾತೃ ಹೃದಯಿಗಳಾಗಿರಬೇಕು. ಸರ್ಕಾರದ ಉದ್ದೇಶ ಮತ್ತು ಧ್ಯೆಯೋದ್ದೇಶಗಳನ್ನು ಅರಿತು ಜನರಿಗೆ ಉತ್ತಮ ಆಡಳಿತ ನೀಡಬೇಕು ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಭಾಗದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರೊಂದಿಗೆ ಕಂದಾಯ ಇಲಾಖೆಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಅಡಳಿತದಲ್ಲಿ ಬದಲಾವಣೆ ತರಬೇಕು. ಸರಳೀಕರಣಕ್ಕೆ ಆದ್ಯತೆ ಕೊಡಿ. ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ–ಸಿಬ್ಬಂದಿಗಳು ತಂಡದ ರೂಪದಲ್ಲಿ ಕಾರ್ಯನಿರ್ವಹಿಸಬೇಕು ಎಂದ ಸಚಿವರು, ಕಂದಾಯ ಸಚಿವನಾದ ಮೇಲೆ ಈಗಾಗಲೆ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನೆ ನಡೆಸಿದ್ದು, ಇಂದು ಇಲ್ಲಿ ನಡೆಸಲಾಗುತ್ತಿದೆ. ಮುಂದೆ ಜಿಲ್ಲಾವಾರು ಸಹ ಪ್ರಗತಿ ಪರಿಶೀಲನೆ ಮಾಡುವುದಾಗಿ ಹೇಳಿದರು.
ಕಳೆದ ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದಾಗಿ ವಿಭಾಗದಲ್ಲಿ ನೆರೆ ಹಾವಳಿಯಿಂದ ಮಾನವ ಮತ್ತು ಜಾನುವಾರುಗಳ ಜೀವ ಹಾನಿ, ಕೃಷಿ ಬಿತ್ತನೆ ಕುರಿತು ಆಯಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಮಾನವ ಸಾವು ಪ್ರಕರಣದಲ್ಲಿ ಜನರಿಗೆ ಪರಿಹಾರ ನೀಡುವುದು ಮುಖ್ಯವಲ್ಲ. ಅವರನ್ನು ಬದುಕಿಸುವುದು ನಮ್ಮ ಆದ್ಯತೆ ಆಗಬೇಕು. ಅದಕ್ಕಾಗಿ ಮಳೆಗಾಲ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಡಳಿತ ವರ್ಗ ಹೆಚ್ಚಿನ ಗಮನ ನೀಡಬೇಕಿದೆ ಎಂದರು.
ಕಷ್ಟದಲ್ಲಿದ್ದವರಿಗೆ ಪರಿಹಾರ ವಿತರಣೆ ಮಾಡುವುದು ಒಳ್ಳೆಯದ್ದೆ. ನೊಂದವರಿಗೆ ಸರ್ಕಾರ ಸಹಾಯ ಹಸ್ತ ಚಾಚುವುದು ಉತ್ತಮ. ಆದರೆ ಇದನ್ನು ದುರಪಯೋಗ ವಾಗಬಾರದು ಎಂಬುದು ನಮ್ಮ ಕಳಕಳಿಯಾಗಿದೆ. ವಿಪತ್ತು ನಿರ್ವಹಣೆ ಹೆಸರಿನಲ್ಲಿ ಹಣ ದುರಪಯೋಗವಾದಲ್ಲಿ ಅದು ಕೆಟ್ಟ ಆಡಳಿತಕ್ಕೆ ಅವಕಾಶ ಮಾಡಿಕೊಡುತ್ತದೆ. ಪರಿಹಾರ ವಿತರಣೆಯ ಕೆಲವೊಂದು ಪ್ರಕರಣದಲ್ಲಿ ಸ್ಯಾಟಲೈಟ್ ಫೋಟೋ ಗಳನ್ನು ಪರೀಕ್ಷಿಸಿ ಜಿಲ್ಲಾಧಿಕಾರಿಗಳು ಪರಿಹಾರ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಭೂಮಿ ತಂತ್ರಾಂಶದಲ್ಲಿ ಪಹಣಿ ಪತ್ರಿಕೆ ತಿದ್ದುಪಡಿ, ವರ್ಗಾವಣೆ ವಿಷಯ ಕುರಿತು ಚರ್ಚೆಯಲ್ಲಿ ಕಲಬುರಗಿ ವಿಭಾಗದಲ್ಲಿ 6 ತಿಂಗಳಿನಿಂದ 5 ವರ್ಷದೊಳಗಿನ 5,266 ಪ್ರಕರಣಗಳು ಬಾಕಿ ಇರುವುದನ್ನು ಗಮನಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ಇಂತಹ ಪ್ರಕರಣಗಳಿಂದಲೆ ಜನರು ಬೇಸತ್ತು ಹೋಗಿ ನನ್ನನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ಬರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ, ಮುಟೇಷನ್ ಡಿಸ್ಪೂಟ್ ಪ್ರಕರಣಗಳನ್ನು 4-5 ವಿಚಾರಣೆಗಳಲ್ಲಿ ಮುಗಿಸಿ ಜನರಿಗೆ ನೆಮ್ಮದಿ ಕಲ್ಪಿಸಿ ಎಂದು ತಹಶೀಲ್ದಾರರಿಗೆ ಖಡಕ್ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಮಾತನಾಡಿ, 3 ತಿಂಗಳ ಒಳಗೆ ಇಂತಹ ಪ್ರಕರಣಗಳು ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳು ಮಾಸಿಕ ಪ್ರಗತಿ ಪರಿಶೀಲನೆ ಮಾಡಬೇಕು. ಡಿ.ಸಿ.ಗಳಿಗೆ ಕಂದಾಯ ಇಲಾಖೆ ಹೊರತಾಗಿ ಇತರೆ ಇಲಾಖೆಯ ಕೆಲಸಗಳು ಇವೆ. ಆದರೆ ಮಾತೃ ಇಲಾಖೆಯ ಮೂಲ ಕೆಲಸ ಮಾತ್ರ ಮರೆಯಬಾರದು ಎಂದರು.
ಆಗಸ್ಟ್ 3 ರಿಂದ ಬೆಳೆ ಹಾನಿ ಸರ್ವೆ ಕಾರ್ಯ ಆರಂಭಿಸಿ; ಕಳೆದ ಜೂನ್ ಮತ್ತು ಜುಲೈ ಮಾಹೆಯಲ್ಲಿ ಸುರಿದ ಮಳೆಯಿಂದಾದ ಬೆಳೆ ಮತ್ತು ಮನೆ ಹಾನಿಗಳನ್ನು ಅಗಸ್ಟ್ 3 ರಿಂದ 7ರ ವರೆಗೆ ಮುಗಿಸಬೇಕು ಎಂದು ಡಿ.ಸಿ.ಗಳಿಗೆ ಸಚಿವರು ನಿರ್ದೇಶನ ನೀಡಿದರು.
ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ.ಮಂಜುನಾಥ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್.ಮಮತಾ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಕಲಬುರಗಿ ಡಿ.ಸಿ ಬಿ.ಫೌಜಿಯಾ ತರನ್ನುಮ್, ಯಾದಗಿರಿ ಡಿ.ಸಿ. ಡಾ.ಬಿ.ಸುಶೀಲಾ, ಬೀದರ ಡಿ.ಸಿ. ಗೋವಿಂದರೆಡ್ಡಿ, ರಾಯಚೂರು ಡಿ.ಸಿ. ಎಲ್.ಚಂದ್ರಶೇಖರ ನಾಯಕ್, ಬಳ್ಳಾರಿ ಡಿ.ಸಿ. ಪ್ರಶಾಂತ ಕುಮಾರ ಮಿಶ್ರಾ, ವಿಜಯ ನಗರ ಡಿ.ಸಿ ಎಂ.ಎಸ್.ದಿವಾಕರ, ಕೊಪ್ಪಳ ಡಿ.ಸಿ ಸುಂದರೇಶ ಬಾಬು ಎಂ. ಸೇರಿದಂತೆ ವಿಭಾಗದ ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳು, ತಹಶೀಲ್ದಾರರು, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಭಾಗವಹಿಸಿದ್ದರು.