ಗುಂಡ್ಲುಪೇಟೆ: ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮಲ್ಲಯ್ಯನಪುರ ಗ್ರಾಮಸ್ಥರು ಮತ್ತು ರೈತ ಸಂಘಟನೆ ಪದಾಧಿಕಾರಿಗಳು ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಮಲ್ಲಯ್ಯನಪುರ ಗ್ರಾಮವು ಸಂಪರ್ಕ ರಸ್ತೆಯಲ್ಲಿ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಹೋಗಲು ಪೂರ್ಣ ಪ್ರಮಾಣದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅವಲಂಬಿಸಿದ್ದಾರೆ. ನಿತ್ಯ 300 ರಿಂದ 350 ವಿದ್ಯಾರ್ಥಿಗಳ ಸಂಚಾರಕ್ಕೆ ಒಂದು ಬಸ್ ಸಾಕಾಗುತ್ತಿಲ್ಲ. ಇದರಿಂದ ಕೃಷಿ, ಕೂಲಿ ಬಿಟ್ಟು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಬೇಕಿದೆ. ದ್ವಿಚಕ್ರ ವಾಹನ ಇಲ್ಲದವರ ಮನೆ ಮಕ್ಕಳಿಗೆ ಬದಲಿ ವ್ಯವಸ್ಥೆಯಿಲ್ಲದೇ ಶಾಲೆಗೆ ಗೈರು ಹಾಜರಾಗಬೇಕಿದೆ. ಆದ್ದರಿಂದ ಬೆಳಗ್ಗೆ 8 ರಿಂದ 8.30 ರ ಅವಧಿಯಲ್ಲಿ ಮತ್ತೊಂದು ಬಸ್ ಸಂಚಾರದ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಘಟಕ ವ್ಯವಸ್ಥಾಪಕಿ ಪುಷ್ಪ ಮಾತನಾಡಿ, ಕೊರೊನಾ ನಂತರದಲ್ಲಿ ಸಾರಿಗೆ ಬಸ್ ಸಂಚಾರದಲ್ಲಿ ಉಂಟಾಗಿದ್ದ ವ್ಯತ್ಯಯ ಸರಿಪಡಿಸಲಾಗುತ್ತಿದೆ. ನಿಮ್ಮೂರು ಭಾಗದ ಮತ್ತೊಂದು ಮಾರ್ಗದಲ್ಲಿ ಸಂಚರಿಸುವ ಬಸ್ ಅನ್ನು ನಿಮ್ಮ ಗ್ರಾಮಕ್ಕೂ ಬಂದು ಹೋಗುವ ವ್ಯವಸ್ಥೆ ಮಾಡಲು ಅವಕಾಶವಿದೆ. ಆದ್ದರಿಂದ ಗ್ರಾಮಕ್ಕೆ ಭೇಟಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆ ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಯ್ಯನಪುರ ಶಿವಣ್ಣ, ಮುಖಂಡರಾದ ಜಿ.ರಘು, ನಾಗರಾಜು, ಶಿವಕುಮಾರ್, ರವಿಚಂದ್ರ, ರೇವಣ್ಣ, ಮಂಜು, ಮಲ್ಲಿಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.