ನವದೆಹಲಿ/ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಕುರ್ಚಿ ಕಿತ್ತಾಟ ಫೈಟ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇದೇ ಶನಿವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಿಎಂ, ಡಿಸಿಎಂ ಇಬ್ಬರೂ ಸಭೆಗೆ ತೆರಳೋ ಸಾಧ್ಯತೆಯಿದ್ದು, ಇನ್ನೆರಡು ದಿನಗಳಲ್ಲಿ ಸಂಧಾನ ಸೂತ್ರ ಹೊರಬೀಳಲಿದೆ.
ಅಲ್ಲದೇ ಸಿಎಂ-ಡಿಸಿಎಂ ಮುಖಾಮುಖಿ ಆಗುವುದಕ್ಕೂ ಮುನ್ನ ಹೈಕಮಾಂಡ್ಗೆ ಕ್ಲ್ಯಾರಿಟಿಯ ಅಗತ್ಯವಿದೆ. ಹೀಗಾಗಿ ಇಂದು ನಿರ್ಣಾಯಕ ಸಭೆ ನಡೆಸಲಿದೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ. ದೆಹಲಿಯ ಕಾಂಗ್ರೆಸ್ ಭವನದಲ್ಲಿಂದು ರಾಜ್ಯ ಕಾಂಗ್ರೆಸ್ ಪಾಲಿನ ನಿರ್ಣಾಯಕ ಸಭೆ ನಡೆಯಲಿದ್ದು, ಯಾರು ಸಿಎಂ ಬೇಕು ಅನ್ನೋದರ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ.
ಅದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಒಟ್ಟು ಸೇರಿ ಇಂದು ಸಭೆ ನಡೆಸಲಿದ್ದಾರೆ ಅಂತ ಹೇಳಲಾಗ್ತಿದೆ. ಇಂದಿನ ಸಭೆಯಲ್ಲಿ ಪವರ್ ಶೇರಿಂಗ್ ವಿಚಾರದಲ್ಲಿ ಹೈಕಮಾಂಡ್ ನಿಲುವು ಒಂದು ಕ್ಲಾರಿಟಿಗೆ ಬರುವ ಸಾಧ್ಯತೆಯಿದೆ.
ಸಿಎಂ-ಡಿಸಿಎಂ ಇಬ್ಬರ ನಡುವಿನ ಸಂಧಾನ ಸೂತ್ರಕ್ಕೆ ಯಾವ ಮಾನದಂಡ? ಏನು ಸಂಧಾನ ಫಾರ್ಮುಲಾ ಎಂಬುದನ್ನ ಹೈಕಮಾಂಡ್ ಇಂದು ನಿಗದಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಬರುವಾಗ ಖರ್ಗೆಗೆ ರಾಹುಲ್ ಗಾಂಧಿ ದೂರವಾಣಿ ಕರೆ ಮಾಡಿ ಸುಮಾರು 20 ನಿಮಿಷಗಳ ಚರ್ಚೆ ನಡೆಸಿದ್ದಾರೆ. ಅಲ್ಲದೇ ಇಂದು (ಗುರುವಾರ) ಬೆಂಗಳೂರಿಂದ ಮತ್ತೆ ದೆಹಲಿಗೆ ಖರ್ಗೆ ಹೋಗಲಿದ್ದು, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ ಸಂಜೆ ಹೈವೋಲ್ಟೇಜ್ ಮೀಟಿಂಗ್ ನಡೆಸಲಿದ್ದಾರೆ.
ನ.29ರ ಸಭೆಗೂ ಮೊದಲು ರಾಜ್ಯದ ಬೆಳವಣಿಗೆಯ ಬಗ್ಗೆ ಹೈಕಮಾಂಡ್ ನಾಯಕರು ಗಂಭೀರವಾಗಿ ಚರ್ಚಿಸಲಿದ್ದಾರೆ. ಇನ್ನೂ, ಕಾಂಗ್ರೆಸ್ನಲ್ಲಿರೋ ಸಮಸ್ಯೆಯನ್ನು ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿಕೊಂಡಿದ್ದಾರೆ. ಪಕ್ಷದಲ್ಲಿ ಸಮಸ್ಯೆ ಇದೆ. ಹೈಕಮಾಂಡ್ ಮದ್ದರೆಯಲಿದೆ ಅಂದಿದ್ದಾರೆ.



