ಬೆಂಗಳೂರು : ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ಕಡಿಮೆಯಾಗಿಯಾಗುತ್ತದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಪತ್ರಕರ್ತೆಯರ ಸಂಘದ ವತಿಯಿಂದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಶ್ರೀ ಸಿದ್ದರಾಮಯ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ’ ವನ್ನು ಉದ್ಘಾಟಿಸಿ ಜೊತೆಗೆ ಸುಶೀಲ ಸುಬ್ರಮಣ್ಯ ಮತ್ತು ಎಂ.ಎಚ್. ನೀಳಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಈ ವೇಳೆ ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ಕಡಿಮೆ ಆಗುತ್ತದೆ ಏಕೆಂದರೆ ಅಭಿವ್ಯಕ್ತಿ ಎನ್ನುವುದು ಮಹಿಳೆಯರ ಚೈತನ್ಯದಲ್ಲಿಯೇ ಇದೆ. ಪತ್ರಕರ್ತೆಯರು ಸಹಜವಾಗಿ ಅಭಿವ್ಯಕ್ತಿಗೊಂಡಷ್ಟು ಸಮಾಜ ಸ್ವಾಸ್ಥವಾಗಿರುತ್ತದೆ ಎಂದಿದ್ದಾರೆ.
ಇವತ್ತಿನವರೆಗೂ ಯುದ್ಧವನ್ನು ರೋಚಕವಾಗಿ, ವಿಜೃಂಭಿಸಿ ಬರೆದ ಪತ್ರಕರ್ತೆಯನ್ನು ನಾನು ನೋಡಿಲ್ಲ. ಹೀಗಾಗಿ ಪತ್ರಕರ್ತೆಯರ ಅಭಿವ್ಯಕ್ತಿ ಹೆಚ್ಚು ಸಮಾಜಮುಖಿ ಆಗಿರುತ್ತದೆ ಎಂದು ಹೇಳಿದರು. ಮತ್ತು ಕನ್ನಡ ಪತ್ರಿಕೋದ್ಯಮವನ್ನು ಕಟ್ಟಿ ಬೆಳೆಸುವಲ್ಲಿ ಪತ್ರಕರ್ತೆಯರು ಸಮನಾದ ಶ್ರಮವನ್ನು ಹಾಕಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತೆಯರು ಈಚಿನ ದಿನಗಳಲ್ಲಿ ಪುರವಣಿ, ಪಾಕ್ಷಿಕ, ಮಾಸಿಕಗಳಿಗೆ ಸೀಮಿತಗೊಳ್ಳುತ್ತಿದ್ದಾರೆ. ಎಲ್ಲ ವಿಭಾಗಗಳಲ್ಲೂ ಅದರಲ್ಲಿಯೂ ರಾಜಕೀಯ ವರದಿಗಾರಿಕೆಯಲ್ಲಿ ಪತ್ರಕರ್ತೆಯರ ಸಂಖ್ಯೆ ಹೆಚ್ಚಳಗೊಳ್ಳಬೇಕಿದೆ. ರಾಜಕೀಯ ವಿಡಂಬನೆಗಳ ಮೂಲಕ ರಾಜಕಾರಣಿಗಳನ್ನು ತಿದ್ದುವ ಅವಕಾಶಗಳನ್ನು ಪತ್ರಕರ್ತೆಯರು ಕೇಳಿ ಪಡೆದುಕೊಳ್ಳಬೇಕು ಎಂದಿದ್ದಾರೆ.
ಕುಟುಂಬದೊಳಗೆ ಇರುವ ರಾಜಕಾರಣವನ್ನು ಬಹಳ ಚೆನ್ನಾಗಿ ಅರಿತ ಮಹಿಳೆಯರು ಪತ್ರಕರ್ತೆಯರಾದರೆ, ಅದರಲ್ಲೂ ರಾಜಕೀಯ ವಿಶ್ಲೇಷಕಿಯರಾದರೆ ರಾಜಕೀಯ ಸೂಕ್ಷ್ಮಗಳನ್ನು, ಒಳಸುಳಿಗಳನ್ನು ಇತರರಿಗಿಂತ ಸಶಕ್ತವಾಗಿ ಅಂದಾಜು ಮಾಡಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಾಗೇ ಸುದ್ದಿ ಹುಡುಕಿಕೊಂಡು ಹೋಗುವ ಪರಿಪಾಠ ಇಲ್ಲವಾಗಿ ಸುದ್ದಿಯೇ ಹುಡುಕಿಕೊಂಡು ಬರಲಿ ಎನ್ನುವ ಮನಸ್ಥಿತಿ ಪತ್ರಿಕಾ ವೃತ್ತಿಗೆ ಅಪಾಯ ತಂದೊಡ್ಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾಜಕ್ಕೆ ಶಾಪವಾಗಬಾರದು ಎಂದು ತಿಳಿಸಿದರು.



