ಚೆನ್ನೈ : ಕರೂರ್ ಕಾಲ್ತುಳಿತದ ಘಟನೆಯ ನಂತರ ತಮಿಳುನಾಡು ವಿಧಾನಸಭಾ ಚುನಾವಣೆಯ ಪೂರ್ವ ತಯಾರಿಯ ದಿಕ್ಕು ಬದಲಾಗಬಹುದು ಅದರಲ್ಲೂ ಪ್ರಮುಖವಾಗಿ, ಅಲ್ಲಿನ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ದಳಪತಿ ವಿಜಯ್ ಅವರ ಟಿವಿಕೆ ಬೆಂಬಲ ಯಾರಿಗೆ ಸಿಗಬಹುದು ಎನ್ನುವುದು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಎಐಎಡಿಎಂಕೆಯಲ್ಲಿ ಉತ್ತಮ ಸ್ಥಾನದಲ್ಲಿದ್ದ ಸೆಂಗೊಟ್ಟೈಯನ್ ಅವರನ್ನು ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಉಚ್ಚಾಟಿಸಿದ ನಂತರ, ಅವರು ವಿಜಯ್ ಅವರ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಆ ಮೂಲಕ, ಎನ್ಡಿಎ ಮೈತ್ರಿಕೂಟದ ಜೊತೆಗೆ ಯಾವುದೇ ಹೊಂದಾಣಿಕೆಯಿಲ್ಲ ಎಂದು ಪರೋಕ್ಷವಾಗಿ ಸಾರಿದ್ದು, ಜಯಲಲಿತಾ ನಿಧನದ ನಂತರ ಎಐಎಡಿಎಂಕೆ ಪಾರ್ಟಿಯು ಹರಿದು ಹಂಚಿ ಹೋಗಿದೆ ಎನ್ನಲಾಗಿದೆ. ಪನ್ನೀರಸೆಲ್ವಂ, ಶಶಿಕಲಾ, ಟಿಟಿವಿ ದಿನಕರನ್, ಒಬ್ಬೊಬ್ಬರದ್ದು ಒಂದೊಂದು ರಾಜಕೀಯವಾಗಿರುವುದು, ಬಿಜೆಪಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ವಿಜಯ್ ಪಾರ್ಟಿಗೆ ಬೀಳುವ ಮತಗಳು ಯಾವ ಮೈತ್ರಿಕೂಟಕ್ಕೆ ಸೇರಿದ್ದಾಗಿರುತ್ತದೆ ಎನ್ನುವುದನ್ನು ಅಮಿತ್ ಶಾಗೆ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಬಿಜೆಪಿಯ ದೆಹಲಿ ನಾಯಕರು ಎಎಂಎಂಕೆ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರನ್ನು ಇತ್ತೀಚೆಗೆ ಸಂಪರ್ಕಿಸಿದ್ದು, ದಿನಕರನ್ ಕೆಲವು ದಿನಗಳ ಹಿಂದೆ, ವಿಜಯ್ ಅವರ ಪಾರ್ಟಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಇದಕ್ಕಾಗಿ, ದೆಹಲಿ ಬಿಜೆಪಿ ನಾಯಕರು, ತಮ್ಮ ನಿರ್ಧಾರವನ್ನು ಸ್ವಲ್ಪದಿನದ ಮಟ್ಟಿಗೆ ತಡೆ ಹಿಡಿಯಲು ವಿನಂತಿಸಿಕೊಂಡಿದ್ದಾರೆ. ಬಿಜೆಪಿ ನಾಯಕರ ಮನವಿಗೆ ಸ್ಪಂದಿಸಿರುವ ದಿನಕರನ್, ಒಂದಕ್ಕೊಂದು ಕಂಡೀಷನ್ ಹಾಕಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಈ ಕುರಿತು ದಿನಕರನ್ ಅವರ ಪಾರ್ಟಿಯನ್ನು ಎನ್ಡಿಎ ಮೈತ್ರಿಕೂಟಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾದರೆ, ಎಡಪ್ಪಾಡಿ ಪಳನಸ್ವಾಮಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬಾರದು ಎನ್ನುವ ಷರತ್ತನ್ನು ಹಾಕಿದ್ದಾರೆ. ಇದು ಅಸಾಧ್ಯವಾದರೂ, ವಿಜಯ್ ಪಾರ್ಟಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಬಹಿರಂಗ ಹೇಳಿಕೆಯನ್ನು ನೀಡದಂತೆ ಬಿಜೆಪಿ ನಾಯಕರು ಸೂಚಿಸಿದ್ದು, ಸದ್ಯ ಇದಕ್ಕೆ ದಿನಕರನ್ ಒಪ್ಪಿಕೊಂಡಿದ್ದಾರೆ.
ಆದರೆ, ಬಿಜೆಪಿ ಅಥವಾ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಿಜಯ್ ಎಲ್ಲಾ ಕಡೆ ಸ್ಪಷ್ಟನೆಯನ್ನು ಕೊಡುತ್ತಿದ್ದು, ಬಿಜೆಪಿಯ ಮಾತಿಗೆ ಸೊಪ್ಪು ಹಾಕದಿದ್ದರೂ, ನಮ್ಮ ಮಾತಿಗೆ ಒಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ ಎಡಪ್ಪಾಡಿ ಪಳನಿಸ್ವಾಮಿ. ವಿಜಯ್ ಹೋದಲೆಲ್ಲಾ, ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಆದರೆ, ಇದು ಮತವಾಗಿ ಪರಿವರ್ತನೆಯಾಗುತ್ತದಾ ಅಥವಾ ಚಿತ್ರನಟನನ್ನು ನೋಡಲು ಜನರು ಬಂದಿದ್ದಾರಾ ಅದಲ್ಲದೇ ಇವರ ಮತಬ್ಯಾಂಕ್, ಯಾರಿಗೆ ಎಫೆಕ್ಟ್ ಆಗಲಿದೆ ಎನ್ನುವ ಲೆಕ್ಕಾಚಾರ, ಎನ್ಡಿಎ ಅಥವಾ ಡಿಎಂಕೆ ಮೈತ್ರಿಕೂಟಕ್ಕೆ ಸದ್ಯ ಇಲ್ಲದೇ ಇರುವುದು, ಕಾರ್ಯತಂತ್ರ ರೂಪಿಸಲು ಹಿನ್ನಡೆಯಾಗುತ್ತಿದೆ.
ಈ ಮಾಸಾಂತ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮಿಳುನಾಡಿಗೆ ಭೇಟಿ ನೀಡಲಿದ್ದು, ರಾಜ್ಯದಲ್ಲಿ ಎನ್ಡಿಎ ಮೈತ್ರಿಕೂಟವನ್ನು ಬಲ ಪಡಿಸಲು ಏನೇನು ಕ್ರಮವನ್ನು ತೆಗೆದುಕೊಳ್ಳಬೇಕು ಎನ್ನುವ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ನೈನಾರ್ ರಾಜೇಂದ್ರನ್ ಹೇಳಿದ್ದಾರೆ. ದಿನಕರನ್ ಅವರನ್ನು ಸೆಳೆಯಲು ಸ್ಪಷ್ಟವಾದ ಮಾರ್ಗಸೂಚಿ ಬಿಜೆಪಿಯಲ್ಲಿ ಸದ್ಯದ ಮಟ್ಟಿಗೆ ಇಲ್ಲದಿದ್ದರೂ, ಅಮಿತ್ ಶಾ ಅವರನ್ನು ಸೆಳೆಯಬಲ್ಲರು ಎನ್ನುವುದು ಬಿಜೆಪಿಯ ವಿಶ್ವಾಸದ ಮಾತಾಗಿದೆ.
ಕಾಲ್ತುಳಿತದ ಘಟನೆಯ ನಂತರ, ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ವಿಜಯ್ ಅವರನ್ನು ಭೇಟಿಯಾಗಿದ್ದರು. ಎಲ್ಲಾ ರೀತಿಯ ಬೆಂಬಲವನ್ನು ನೀಡುವ ಭರವಸೆಯನ್ನು ಎಡಪ್ಪಾಡಿ ನೀಡಿದ್ದರು. ವಿಜಯ್ ಅವರ ಪಾರ್ಟಿಯನ್ನು ಹಲವು ಅಡೆತಡೆಯ ನಡುವೆ, ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ವಿಶ್ವಾಸದಲ್ಲೇನೋ ಎಡಪ್ಪಾಡಿ ಇದ್ದಾರೆ. ಇನ್ನೊಂದು ಕಡೆ, ಬಿಜೆಪಿಯು, ದಿನಕರನ್ ಪಾರ್ಟಿಯನ್ನು ಸಂಪರ್ಕಿಸಿರುವುದರಿಂದ, ಇದು, ಎಡಪ್ಪಾಡಿ ಪಳನಿಸ್ವಾಮಿ ವಿರೋಧಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ.
ದೇಶದ ಬೇರೆ ಕಡೆ ಒಂದು ರೀತಿಯ ರಾಜಕೀಯವಾದರೆ, ತಮಿಳುನಾಡಿನಲ್ಲಿ ಇನ್ನೊಂದು ರೀತಿ ಇದೆ ಎನ್ನಲಾಗುತ್ತಿದೆ. ಇಲ್ಲಿ ಏನೆ ನಡೆದರೂ ದ್ರಾವಿಡ ಪಾರ್ಟಿಗಳ ನೆರಳಿನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಸಾಗಬೇಕಿದೆ. ಹಾಗಾಗಿ ವಿಜಯ್ ಮತ್ತು ದಿನಕರನ್ ಅವರ ಪಾರ್ಟಿಯನ್ನು ಎನ್ಡಿಎ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಕಾರ್ಯತಂತ್ರ ರೂಪಿಸುವಲ್ಲಿ ಅಮಿತ್ ಶಾ ಗೊಂದಲದ್ದಲ್ಲಿದ್ದಾರಾ ಎನ್ನುವುದು ಪ್ರಶ್ನೆಯಾಗಿ ಮೂಡಿದೆ.



