ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಪಿಣರಾಯಿ ವಿಜಯನ್ ಅವರು ರಾಜಕೀಯ ಗಿಮಿಕ್ ಮಾಡುವುದು ಬೇಡ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಪಿಣರಾಯಿ ಅವರು ಉತ್ತರ ಪ್ರದೇಶದಂತೆ ಬುಲ್ಡೋಜರ್ ಬಳಸಿ ಮುಸ್ಲಿಮರ ಮನೆ ಧ್ವಂಸ ಮಾಡಲಾಗುತ್ತಿದೆ ಎಂದು ಕರ್ನಾಟಕದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಹೇಳಿಕೆಗೆ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.
ಪಿಣರಾಯಿ ಸಿನೀಯರ್ ಆಗಿ ಅವರು ವಾಸ್ತವ ಅರ್ಥ ಮಾಡಿಕೊಳ್ಳದೇ ಮಾತನಾಡಿದ್ದಾರೆ. ಕೆಲವರು ಡಂಪ್ ಸೈಟ್ನಲ್ಲಿ ಅಕ್ರಮವಾಗಿ ವಾಸವಾಗಿದ್ದರು. ನಮ್ಮ ಶಾಸಕರು, ಅಧಿಕಾರಿಗಳು ಅದನ್ನ ತೆರವು ಮಾಡಿದ್ದಾರೆ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ನಮಗೆ ಬೆಂಗಳೂರು ಬಗ್ಗೆ ಚೆನ್ನಾಗಿ ಗೊತ್ತಿದೆ. ಯಾರು ಮನೆ ಕಳೆದುಕೊಂಡಿದ್ದಾರೋ, ಅವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಹಂಚಿಕೆ ಮಾಡುತ್ತೇವೆ. ನಾವೂ ಬೂಲ್ಡೋಜರ್ ಪದ್ಧತಿ ಬಳಸಿಲ್ಲ. ಈ ಕುರಿತು ನಮ್ಮ ಪಕ್ಷದ ನಾಯಕರಿಗೂ ಮಾಹಿತಿ ನೀಡಿದ್ದೇವೆ. ಅವರು ಇಲ್ಲಿನ ಸ್ಥಿತಿ ತಿಳಿದುಕೊಳ್ಳದೆ ಮಾತನಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸರ್ಕಾರಿ ಜಾಗ ಒತ್ತುವರಿ ಮಾಡಲು ಬಿಡಲ್ಲ. ಚುನಾವಣೆ ಸಂದರ್ಭದಲ್ಲಿ ಪಿಣರಾಯಿ ಅವರು ರಾಜಕೀಯ ಗಿಮಿಕ್ ಮಾಡುವುದು ಬೇಡ. ಸರ್ಕಾರಿ ಜಾಗದಲ್ಲಿ ಸ್ಲಂಗಳನ್ನು ಮಾಡಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.



