ಬಳ್ಳಾರಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಡಿ.25 ರಿಂದ 27ರ ವರೆಗೆ ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಈ ವೇಳೆ ವ್ಯಾಪಕ ಗಣಿಗಾರಿಕೆಯಿಂದ ಕೃಷಿಗೆ ಆಗುತ್ತಿರುವ ತೊಂದರೆಗಳ ಕುರಿತು ರೋಹಿಣಿ ಅವರಿಗೆ ಮನವಿ ಸಲ್ಲಿಸಲು ರೈತರು ಎರಡು ದಿನ ಕಾದಿದ್ದರು.
ಈ ವೇಳೆ ಸಿಂಧೂರಿ ಅವರು ಸರ್ಕಾರಿ ಅತಿಥಿ ಗೃಹದ ಬದಲು ಜಿಂದಾಲ್ ಟೌನ್ಶಿಪ್ನಲ್ಲಿ ತಂಗಿದ್ದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಎರಡು ರೈತ ಸಂಘಟನೆಗಳು ಒತ್ತಾಯಿಸಿದ್ದಾರೆ. ಜಿಂದಾಲ್ ಕಂಪನಿಯು ಉಕ್ಕು ಉತ್ಪಾದನೆ ಜತೆಗೆ, ಸಂಡೂರಿನಲ್ಲಿ ಗಣಿಗಾರಿಕೆಯಲ್ಲೂ ತೊಡಗಿದ್ದು, ಇತ್ತೀಚೆಗೆ 4 ಗಣಿಗಳನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಆದರೆ, ಈ ಗಣಿಗಳ ಹರಾಜಿನ ವೇಳೆ ಸರ್ಕಾರ ಸುಪ್ರೀಂ ಕೋರ್ಟ್ನ ಆದೇಶಗಳನ್ನು ಉಲ್ಲಂಘಿಸಿದೆ ಎಂದು ಕೇಂದ್ರದ ಉನ್ನತಾಧಿಕಾರಿ ಸಮಿತಿಯು ಸುಪ್ರಿಂ ಕೋರ್ಟ್ಗೆ ವರದಿ ನೀಡಿದೆ.
ಈ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿರುವ ಜಿಂದಾಲ್ ಕಂಪನಿ, ಸರ್ಕಾರದ ವಿವಿಧ ಇಲಾಖೆಗಳನ್ನು ಪ್ರತಿವಾದಿಯಾಗಿಸಿದ್ದು, ಇದರಲ್ಲಿ ಸಿ ಆ್ಯಂಡ್ ಐನ ಈಗಿನ ಕಾರ್ಯದರ್ಶಿ ರೋಹಿಣಿ ಅವರೂ ಪ್ರತಿವಾದಿಯಾಗಿದ್ದಾರೆ. ಹೀಗಿದ್ದರೂ, ಅದೇ ಜಿಂದಾಲ್ನಲ್ಲಿ ಆತಿಥ್ಯ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ರೈತ ಸಂಘ ಆರೋಪಿಸಿದೆ.
ಸರ್ಕಾರಿ ಅಧಿಕಾರಿಯಾಗಿದ್ದರೂ, ಸರ್ಕಾರದ ವಸತಿಗೃಹ ಬಳಸದೇ, ಖಾಸಗಿ ಉದ್ದಿಮೆದಾರರ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿರುವುದು ಆಕ್ಷೇಪಾರ್ಹ. ತಮ್ಮ ಈ ಪ್ರವಾಸಕ್ಕೆ ರಜಾ ದಿನದಲ್ಲಿಯೂ ಸರ್ಕಾರಿ ಅಧಿಕಾರಿಗಳನ್ನು, ಸರ್ಕಾರದ ವಾಹನಗಳನ್ನು ರೋಹಿಣಿ ಬಳಸಿದ್ದು, ಈ ಮೂಲಕ ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳು– 1966 ಅನ್ನು ಅವರು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಕುರಿತು ದೂರು ಅರ್ಜಿಯನ್ನು ಡಿ.28 ರಂದು ಮುಖ್ಯಕಾರ್ಯದರ್ಶಿಗೆ ರವಾನಿಸಲಾಗಿದೆ. ಜಿಂದಾಲ್ ಗ್ರೂಪ್ ಈ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು, ವಾಣಿಜ್ಯ ಮತ್ತು ಕೈಗಾರಿಕೆಗಳು ಸೇರಿದಂತೆ ಹಲವಾರು ಸರ್ಕಾರಿ ಇಲಾಖೆಗಳನ್ನು ಪ್ರತಿವಾದಿಗಳಾಗಿ ಹೆಸರಿಸಿದೆ. ಇಲಾಖೆಯ ಕಾರ್ಯದರ್ಶಿಯಾಗಿ, ಸಿಂಧೂರಿ ಕೂಡ ಈ ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ, ಕಂಪನಿಯ ಒಡೆತನದ ಸೌಲಭ್ಯಗಳಲ್ಲಿ ಅವರ ವಾಸ್ತವ್ಯವು ಗಂಭೀರ ಅನುಮಾನಗಳನ್ನು ಹುಟ್ಟುಹಾಕುವುದಲ್ಲದೆ ಹಿತಾಸಕ್ತಿ ಸಂಘರ್ಷ ಸೃಷ್ಟಿಸುತ್ತದೆ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.



