ಮೈಸೂರು: ಮಕ್ಕಳಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸುವ ರೀತಿ ಪುಟ್ಟ ಕರುವಿಗೆ ಮೈಸೂರಿನ ಕುಟುಂಬವೊಂದು ತೊಟ್ಟಿಲು ಶಾಸ್ತ್ರ ಮಾಡಿದೆ.
ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಹಿಂಭಾಗದ ಕೆ.ಆರ್ ವನಂ ಮನೆಯಲ್ಲಿ ಈ ತೊಟ್ಟಿಲು ಶಾಸ್ತ್ರ ನೆರವೇರಿದೆ. ಪುಂಗನೂರು ಎಂಬ ಆಂಧ್ರ ಪ್ರದೇಶ ಮೂಲದ ದೇಸಿ ಹಸುಗಳನ್ನು ಮಧುಸೂದನ ತಾತಾಚಾರ್ಯ ಮತ್ತು ಕುಟುಂಬದವರು ಸಾಕುತ್ತಿದ್ದಾರೆ. ಮೂರು ಹಸು ಮತ್ತು ಎರಡು ಕರುಗಳನ್ನು ಮನೆಯ ಕಾರ್ ಶೆಡ್ ನಲ್ಲಿ ಸಾಕುತ್ತಿದ್ದಾರೆ.
ಸಿರಿ, ನಿಧಿ, ಸಿಹಿ ಎಂಬ ಹಸುಗಳು ಮತ್ತು ಸಿರಿಯ ಮಗಳಾದ ಭುವಿ ಮತ್ತು ನಿಧಿಯ ಮಗಳಾದ ಸ್ವಾತಿ ಎಂಬ ಕರುಗಳನ್ನು ಸಾಕುತ್ತಿದ್ದು, ಇತ್ತೀಚೆಗಷ್ಟೇ ಎರಡೂ ಕರುಗಳಿಗೆ ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಿದ್ದಾರೆ.
ಮಕ್ಕಳಂತೆ, ಮನೆಯ ಸದಸ್ಯರಂತೆ ಹಸುಗಳನ್ನು ಸಾಕುವ ವಿಶಿಷ್ಟ ಸಂಸ್ಕೃತಿಯು ನಮ್ಮ ದೇಶದಲ್ಲಿದೆ. ಅದರಂತೆ ನಾವು ಮನೆಯ ಮಕ್ಕಳಂತೆ ಹಸುಗಳನ್ನು ನೋಡಿಕೊಳ್ಳುತ್ತಾ, ಮಾತೃ ಸ್ವರೂಪವಾದ, ಮುಕ್ಕೋಟಿ ದೇವತೆಗಳು ವಾಸಸ್ಥಾನವಾದ ಗೋವುಗಳ ಸೇವೆಯನ್ನು ಮಾಡಿಕೊಂಡು ಬಂದಿದ್ದೇವೆ ಎಂದು ಕುಟುಂಬಸ್ಥರು ಸಂತಸ ಹಂಚಿಕೊಂಡಿದ್ದಾರೆ.



