ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರಿ ಸುದ್ದಿಯಲ್ಲಿರುವ ಬಳ್ಳಾರಿ ಬ್ಯಾನರ್ ಬ್ಯಾನರ್ ಗಲಾಟೆಯು ಹಲವಾರು ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಸತೀಶ್ ಜಾರಕಿಹೊಳಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬ್ಯಾನರ್ ಕಟ್ಟಿದ್ದಕ್ಕಾಗಿ ಗಲಾಟೆ ಮಾಡಿರುವುದು ಸರಿಯಲ್ಲ. ಸಮಸ್ಯೆ ಯಾರಿಂದ ಉದ್ಭವವಾಗಿದೆ ಎಂಬುದು ನೋಡಬೇಕಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಮುಂದೂಡುವ ಹುನ್ನಾರ ನಡೆದಿದೆ ಎಂಬ ಅನುಮಾನ ಕಾಡುತ್ತಿದೆ ಎಂದರಲ್ಲದೆ ಬಳ್ಳಾರಿಯಲ್ಲಿ ಈವರೆಗೂ ವಾಲ್ಮೀಕಿ ಅವರ ಪ್ರತಿಮೆ ನಿರ್ಮಾಣವಾಗಿರಲಿಲ್ಲ. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮತ್ತು ಬಳ್ಳಾರಿ ನಗರದ ಶಾಸಕ ಭರತ್ ರೆಡ್ಡಿ ಸೇರಿ ಪ್ರತಿಮೆ ನಿರ್ಮಿಸಿದ್ದು, ಅದರ ಉದ್ಘಾಟನೆಗೆ ನನಗೂ ಆಹ್ವಾನ ಇತ್ತು. ನಾನು ಹೋಗುವ ತಯಾರಿಯಲ್ಲಿದ್ದೆ. ಆದರೆ ಅಷ್ಟರಲ್ಲಿ ಗಲಾಟೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಅಲ್ಲದೇ ಪೋಸ್ಟರ್ ಹಾಕಿದರೆ ಅದು ಎರಡು ದಿನ ಇರುತ್ತದೆ ನಂತರ ಹೋಗುತ್ತದೆ. ಅದಕ್ಕಾಗಿ ಗಲಾಟೆ ಮಾಡಿರುವುದು ಸರಿಯಲ್ಲ. ವಾಲ್ಮೀಕಿ ಅವರ ಹೆಸರನ್ನು ಮುಂದಿಟ್ಟುಕೊಂಡು ಗಲಾಟೆ ಮಾಡಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನ ಜೀವ ಹಾನಿಯಾಗಿದ್ದು, ಪ್ರಕರಣ ಬೇರೆ ಹಾದಿಯೇ ಪಡೆದುಕೊಂಡಿದೆ ಎಂದರು.
ಇನ್ನೂ ಈ ಬಗ್ಗೆ ಶಾಸಕ ಭರತ್ ರೆಡ್ಡಿ ಅವರ ಜೊತೆ ತಾವು ಚರ್ಚೆ ನಡೆಸಲಿದ್ದು, ಕಾರ್ಯಕ್ರಮ ನಡೆದಿದ್ದಾದರೆ ಅದರಲ್ಲಿ ಭಾಗವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಏಕೆ ಮುಖ್ಯಮಂತ್ರಿಯಾಗಬಾರದು ಎಂದು ಪ್ರಶ್ನಿಸಿದರು ಹಾಗೂ ಅವರು ಪಕ್ಷದ ಹಿರಿಯ ನಾಯಕರಾಗಿದ್ದು, ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗಲಿದೆಯೋ ಕಾದು ನೋಡುವುದಾಗಿ ಹೇಳಿದರು.



