ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುರ್ಚಿ ಸುತ್ತುವರೆದು ಅವರು ಭಾಷಣ ಮಾಡದಂತೆ ತಡೆಯಲು ಯತ್ನಿಸಿದ ಪ್ರತಿಪಕ್ಷಗಳ ಮಹಿಳಾ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಸಂಸದರ ನಿಯೋಗ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಪತ್ರದಲ್ಲಿ ಫೆ. 4ರಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರ ನಡವಳಿಕೆಯನ್ನು ಬಿಜೆಪಿ ಮಹಿಳಾ ಸಂಸದರು ಪತ್ರದಲ್ಲಿ ವಿವರಿಸಿದ್ದಾರೆ ಮತ್ತು ಲೋಕಸಭೆ ಕೊಠಡಿಯೊಳಗಿನ ಘಟನೆಯನ್ನು ಬೆಳಕಿಗೆ ತಂದಿದ್ದಾರೆ. ಲೋಕಸಭೆಯ ಕೊಠಡಿಯೊಳಗೆ ನಡೆದ ಘಟನೆ ಅತ್ಯಂತ ದುರದೃಷ್ಟಕರ ಮತ್ತು ವಿಷಾದನೀಯ ಘಟನೆಗಳಲ್ಲಿ ಒಂದನ್ನು ನಾವು ನೋಡಿದ್ದೇವೆ. ವಿರೋಧ ಪಕ್ಷಗಳ ಸದಸ್ಯರು ಸದನದ ಬಾವಿಗೆ ಪ್ರವೇಶಿಸಿದ್ದಲ್ಲದೆ, ಮೇಜುಗಳ ಮೇಲೆ ಹತ್ತುವುದು, ಕಾಗದಗಳನ್ನು ಹರಿದು ಕುರ್ಚಿಯ ಕಡೆಗೆ ಎಸೆಯುವುದನ್ನು ನಾವು ನೋಡಿದ್ದೇವೆ ಎಂದು ಬರೆದಿದ್ದಾರೆ.
ಇನ್ನೂ ಈ ಗಂಭೀರ ಪ್ರಚೋದನೆಯಿಂದ ತೀವ್ರ ಕೋಪಗೊಂಡಿದ್ದರೂ, ತಮ್ಮ ಹಿರಿಯ ನಾಯಕರ ಆದೇಶದ ಮೇರೆಗೆ ಸಂಯಮವನ್ನು ಕಾಯ್ದುಕೊಂಡರು ಹಾಗೂ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ ಎಂದು ಮಹಿಳಾ ಸಂಸದರು ಹೇಳುತ್ತಾರೆ. ನಾವು ಸಂಯಮವನ್ನು ಕಾಯ್ದುಕೊಳ್ಳದಿದ್ದರೆ, ಗಂಭೀರ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಲೋಕಸಭೆಯಲ್ಲಿ ನಡೆದ ಈ ಅಪಾಯಕಾರಿ ಘಟನೆ ನಮ್ಮೆಲ್ಲರಿಗೂ ತೊಂದರೆಯುಂಟು ಮಾಡಿದೆ ಎಂದಿದ್ದಾರೆ.
ಸದನದೊಳಗೆ ಇಂತಹ ಹೇಯ ಕೃತ್ಯಗಳನ್ನು ಎಸಗಿದ ವಿರೋಧ ಪಕ್ಷದ ಸಂಸದರ ವಿರುದ್ಧ ನಿಯಮಗಳ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮಹಿಳಾ ಸಂಸದರು ಲೋಕಸಭೆ ಸ್ಪೀಕರ್ಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ವಿರೋಧ ಪಕ್ಷಗಳ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ತಮ್ಮ ತೀವ್ರ ಅಸಮಾಧಾನ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದು, ತಮಿಳುನಾಡು ಲೋಕಸಭಾ ಸಂಸದ ಎಸ್.ಜೋತಿಮಣಿ ಅವರ ಲೆಟರ್ಹೆಡ್ನಲ್ಲಿ ಬರೆಯಲಾದ ಈ ಪತ್ರಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ, ಆರ್.ಸುಧಾ, ಜ್ಯೋತ್ಸ್ನಾ ಚರಂದಾಸ್ ಮಹಾಂತ್ ಮತ್ತು ವರ್ಷಾ ಏಕನಾಥ್ ಗಾಯಕ್ವಾಡ್ ಸೇರಿದಂತೆ ಹಲವಾರು ಮಹಿಳಾ ಸಂಸದರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ.



