ಇಳಕಲ್: ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕು ಮುರಡಿ ಗ್ರಾಮದಲ್ಲಿ ಶನಿವಾರ ಭೀಮಾಂಬಿಕಾ ದೇವಿ ಜಾತ್ರಾ ಮಹೋತ್ಸವ ಸಡಗರದಿಂದ ಜರುಗಿತು. ಜಾತ್ರಾ ಮಹೋತ್ಸವ ಅಂಗವಾಗಿ ದೇವಿಗೆ ಮಹಾ ರುದ್ರಾಭಿಷೇಕ ಹಾಗೂ ಕುಂಭೋತ್ಸವ ನೆರವೇರಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಂಜುನಾಥ ಪಾಟೀಲ, ಕಲ್ಲಪ್ಪ ಅಮರಗಟ್ಟಿ, ಮಹೇಶ ಹಿರೇಮಠ, ಲಕ್ಷ್ಮಮ್ಮ ಧರ್ಮರ, ಉಮ್ಮಪ್ಪ ವಕ್ರ, ಅಮರೇಶ ಹಿರೇಮಠ ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.



