ಮಂಡ್ಯ: ಸಂವಿಧಾನ ಜಾಗೃತಿ ಜಾಥವು ಮಂಡ್ಯ, ನಾಗಮಂಗಲ, ಕೆ.ಆರ್ ಪೇಟೆ ತಾಲ್ಲೂಕಗಳ ಗ್ರಾಮ ಪಂಚಾಯತಿಗಳಲ್ಲಿ ಸಂಚರಿಸಿ ಪ್ರಜೆಗಳಲ್ಲಿ ಸಂವಿಧಾನದ ಅರಿವು ಮೂಡಿಸಿ ಯಶಸ್ವಿಯಾದ ಸಂವಿಧಾನ ಜಾಗೃತಿ ಜಾಥವನ್ನು ಇಂದು ಪಾಂಡವಪುರ ತಾಲ್ಲೂಕಿನ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ತಾಲ್ಲೂಕಿಗೆ ಬರ ಮಾಡಿಕೊಳ್ಳಲಾಯಿತು.
ಸಂವಿಧಾನ ಜಾಗೃತಿ ಜಾಥವು ಡಿಂಕ, ಬನ್ನಂಗಾಡಿ, ಕಟ್ಟೇರಿ, ಅರಳಕುಪ್ಪೆ, ಹೊನಗಾನಹಳ್ಳಿ, ಗುಮ್ಮನಹಳ್ಳಿ, ಚಿನಕುರಳಿ, ನಾರಾಯಣಪುರ, ಬಳಿಘಟ್ಟ ಪಂಚಾಯಿತಿಗಳಲ್ಲಿ ಸಂಚರಿಸಿ ಸಂವಿಧಾನ ಜಾಗೃತಿ ಮೂಡಿಸಲಾಯಿತು. ತಾಲ್ಲೂಕಿನ ಕಟ್ಟೇರಿಗೆ ಸಂವಿಧಾನ ಜಾಗೃತಿ ಜಾಥ ಆಗಮಿಸಿದ ವೇಳೆ ಎಲ್ಲಾ ಸಮುದಾಯದ ಮುಖಂಡರು ಬೈಕ್ ಜಾಥ ಮಾಡುವ ಮುಖಾಂತರ ಜಾಗೃತ ಜಾಥವನ್ನು ಬರಮಾಡಿಕೊಂಡರು. ಸಾರ್ವಜನಿಕರಿಗೆ ಸಂವಿಧಾನ ನೀಡಿರುವ ಹಕ್ಕುಗಳು ಹಾಗೂ ಜವಾಬ್ಧಾರಿಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅರಿವು ಮೂಡಿಸಲಾಯಿತು.
ಜಾಥಾ ಸಾಗುವ ದಾರಿಯುದ್ದಕ್ಕೂ ವಿವಿಧ ಕಲಾ ತಂಡಗಳಿಂದ ಪೂಜಾ ಕುಣಿತ, ಡೊಳ್ಳು ಕುಣಿತ, ಕಂಸಾಳೆ ನೃತ್ಯ ಮತ್ತು ಕುಂಭಮೇಳಗಳು ಜಾಥಾಕ್ಕೆ ಮೆರುಗು ತಂದವು. ಶಾಲಾ ಪುಟಾಣಿಗಳ ರಾಷ್ಟ್ರ ನಾಯಕರ ವೇಷಭೂಷಣವು ಎಲ್ಲರ ಗಮನ ಸೆಳೆದದ್ದು ವಿಶೇಷವಾಗಿತ್ತು. ಜಾಥಾದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಊರಿನ ಮುಖಂಡರು, ಎಲ್ಲಾ ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು, ವಿವಿದ ಸಂಘ ಸಂಸ್ಥೆಯ ಪ್ರತಿನಿಧಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.