ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೊಡ್ಡ ತೇರು ಸಂಭ್ರಮ ಸಡಗರಗಳಿಂದ ನಡೆಯಿತು.
ಬೆಟ್ಟದ ತೇರಿನ ಬೀದಿಯಲ್ಲಿ ತೇರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಥದ ಎರಡೂ ಬದಿಯಲ್ಲಿ ಕಟ್ಟಿದ್ದ ಹಗ್ಗವನ್ನು ಗೋವಿಂದನ ನಾಮಸ್ಮರಣೆಯಲ್ಲಿ ಸಾವಿರಾರು ಭಕ್ತರು ಎಳೆದು ಪುನೀತ ಭಾವ ಮೆರೆದರು. ಇದಕ್ಕಾಗಿ ಬೆಳಿಗ್ಗೆ ೫ ಗಂಟೆಯಿಂದಲೇ ವಿವಿಧ ಧಾರ್ಮಿಕ ವಿಧಿಗಳು ನಡೆದವು. ಮೊದಲಿಗೆ ಕಲ್ಯಾಣೋತ್ಸವ, ಪ್ರಸ್ಥಾನ ಮಂಟಪೋತ್ಸವಗಳ ಅಲಂಕಾರ ಮಾಡಲಾಗಿತ್ತು. ದೇವರಿಗೆ ತುಳಸಿ ಸೇರಿದಂತೆ ವಿವಿಧ ಬಣ್ಣಬಣ್ಣದ ಹೂವುಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಾರಥೋತ್ಸವಕ್ಕೆ ದೇವರ ಉತ್ಸವ ಮೂರ್ತಿಯನ್ನು ತೇರಿನೊಳೆ ಇರಿಸಲಾಯಿತು. ಸಾವಿರಾರು ಭಕ್ತರು ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು. ತೇರನ್ನು ಎಳೆಯಲಾಯಿತು.
ವಿವಾಹವಾಗಿರುವ ನೂತನ ದಂಪತಿಗಳೂ ಸೇರಿದಂತೆ ಜಾತ್ರೆಗೆ ಆಗಮಿಸಿದ ಭಕ್ತರು ಇಲ್ಲೇ ಸಿಗುವ ಹಣ್ಣು ಜವನವನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದ್ದು ಕಂಡುಬಂದಿತು. ನವದಂಪತಿಗಳಲ್ಲದೇ ಹರಕೆ ಹೊತ್ತಿದ್ದ ಅನೇಕ ಭಕ್ತರು ಸಹ ಈ ಧಾರ್ಮಿಕ ವಿಧಿಯನ್ನು ತೇರಿಸಿದರು. ಜೊತೆಗೆ ಅಲ್ಲೇ ಧೂಪವನ್ನು ಹಾಕುವ ಮೂಲಕ ಭಕ್ತಿ ಮೆರೆದರು.
ತೇರಿನ ನಂತರ ರಥಧಲ್ಲಿ ಕುಳ್ಳಿರಿಸಿದ್ದ ಉತ್ಸವ ಮೂರ್ತಿಯನ್ನು ವಿವಿಧ ಚಿನ್ನಾಭರಣಗಳಿಂದ ಅಲಂಕಾರಗೊಳಿಸಲಾಗಿತ್ತು. ಹರಕೆ ಹೊತ್ತ ಭಕ್ತರು ತಮ್ಮ ಮಂಟಪಗಳಲ್ಲಿ ಹಸಿರು ಚಪ್ಪರ ತಳಿರು ತೋರಣಗಳಿಂದ ಅಲಂಕರಿಸಿ ದೇವರ ಮೂರ್ತಿಯನ್ನು ಇಲ್ಲಿಟ್ಟು ಪೂಜೆ ಸಲ್ಲಿಸಿದರು.
ಪೋಲಿಸರಿಂದ ಬ್ಯಾರಿಕ್ಯಾಡ್ ಹಾಕಿ ಭಕ್ತರಿಗೆ ಕಿರಿಕಿರಿ: ತೇರು ಮುಗಿಯುತ್ತಿದ್ದಂತೆಯೇ ಬಸ್ಹತ್ತಲು, ಹಾಗೂ ದೂರದಲ್ಲೇ ನಿಲ್ಲಿಸಿದ್ದ ತಮ್ಮ ವಾಹನಗಳಿಗೆ ತೆರಳಲು ಭಕ್ತರು ಹಿಂದಿರುತ್ತಿದ್ದರು. ಆದರೆ ಪೊಲೀಸಿನವರು ಬ್ಯಾರಿಕ್ಯಾಡ್ಗಳನ್ನು ಹಾಕಿ ಇಲ್ಲಿಂದ ತೆರಳುವ ಭಕ್ತರಿಗೆ ತೊಂದರೆ ನೀಡುತ್ತಿದ್ದರಿಂದ ವಾಗ್ವಾದವೂ ನಡೆಯಿತು. ಬಸ್ ಹತ್ತುವ ಜನರನ್ನು ಹತ್ತಿಸಲು ಸರತಿ ಸಾಲಿನಲ್ಲಿ ಕಳುಹಿಸುವ ಉದ್ದೇಶದಿಂದ ಬ್ಯಾರಿಕ್ಯಾಡ್ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ಸಮಜಾಯಿಷಿ ನೀಡುತ್ತಿದ್ದರು. ಆದರೆ ನೂರಾರು ಸಂಖ್ಯೆಯ ಸ್ವಂತ ವಾಹನಗಳಲ್ಲಿ ಬಂದಿದ್ದ ಭಕ್ತರೂ ತಮ್ಮ ವಾಹನಗಳ ಬಳಿಗೆ ನಡೆದುಕೊಂಡು ತೆರಳಲು ಸಹ ತಡೆಯೊಡ್ಡಿದ್ದು ಭಕ್ತರಿಗೆ ಆಕ್ರೋಶ ಬರಿಸಿತ್ತು. ವಾಹನ ದಟ್ಟಣೆ ನಿಮಿತ್ತ ದ್ವಿಚಕ್ರ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶವನ್ನು ನಿಷೇಧಿಸಲಾಗಿತ್ತು.