ತುಮಕೂರು: ತುಮಕೂರಿನಲ್ಲಿ ದೊಡ್ಡ ಅನಾಹುತವೊಂದು ತಪ್ಪಿದ್ದು, ಮಕ್ಕಳ ಕೈ ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆ ಸಿಕ್ಕಿದ್ದು, ಬಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತುಮಕೂರು ಜಿಲ್ಲೆ ಚಿಕ್ಕನಾಯನಕನಹಳ್ಳಿ ತಾಲ್ಲೂಕಿನ ಮಾದೇನಹಳ್ಳಿಯಲ್ಲಿ ಶಾಲೆ ಪಕ್ಕದಲ್ಲೇ ಎಸೆದಿದ್ದ ಸಿಡಿಮದ್ದಿನ ಉಂಡೆಯನ್ನು ಬಾಲ್ ಅಂತ ಭಾವಿಸಿದ್ದ ಯುವರಾಜ ಹಾಗೂ ಶ್ರೀನಿವಾಸ್ ಎಂಬ ಬಾಲಕರು ಸಿಡಿ ಮದ್ದಿನ ಉಂಡೆಯನ್ನು ಕೈಯಲ್ಲಿ ಹಿಡಿದು ಓಡಾಡಿದ್ದಾರೆ.
ಬಳಿಕ ಶ್ರೀನಿವಾಸ್ ಆ ಸ್ಪೋಟಕ ಉಂಡೆಯನ್ನು ತಂದೆಗೆ ನೀಡಿದ್ದ. ಇದು ಯಾವುದೋ ಮಾಟ ಮಂತ್ರದ ಬಾಲ್ ಇರಬೇಕೆಂದು ಭಾವಿಸಿದ ಶ್ರೀನಿವಾಸ್ ತಂದೆ ಅದನ್ನು ದೂರಕ್ಕೆ ಎಸೆದಿದ್ದರು. ಶ್ರೀನಿವಾಸ್ ತಂದೆ ಎಸೆದ ಮದ್ದಿನ ಉಂಡೆಯನ್ನು ನಾಯಿ ಕಚ್ಚುತ್ತಿದ್ದಂತೆ ಸ್ಫೋಟಗೊಂಡಿದೆ.
ಸ್ಫೋಟಗೊಳ್ಳುತ್ತಿದ್ದಂತೆ ಬಾಯಿ ಛಿದ್ರಗೊಂಡು ಸ್ಥಳದಲ್ಲೇ ನಾಯಿ ಪ್ರಾಣ ಬಿಟ್ಟಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಾಲರು ಪಾರಾಗಿದ್ದಾರೆ.
ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆಯನ್ನು ಶಾಲೆ ಪಕ್ಕದಲ್ಲಿ ಎಸೆದವರು ಯಾರು ? ಎಂಬುದು ತಿಳಿದುಬಂದಿಲ್ಲ.
ಸ್ಥಳಕ್ಕೆ ಬುಕ್ಕಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಕ್ಕಳೊಂದಿಗೆ ಮಾಹಿತಿ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.