ಸಬ್ ಇನ್ಸ್ಪೆಕ್ಟರ್ ನವ್ಯ ಅವರಿಂದ ಬ್ಯಾಂಕ್ ನಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ
ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಪಟ್ಟಣದಲ್ಲಿರುವ ಬ್ಯಾಂಕ್ ಗಳ ವ್ಯವಸ್ಥಾಪಕರು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅಪರಾಧಗಳನ್ನು ತಡೆಗಟ್ಟಲು ಆರಕ್ಷಕ ಇಲಾಖೆಯೊಂದಿಗೆ ಸಹಕರಿಸುವಂತೆ ಸಬ್ ಇನ್ಸ್ಪೆಕ್ಟರ್ ನವ್ಯ ತಿಳಿಸಿದರು.
ಪಟ್ಟಣದ ಆರಕ್ಷಕ ಠಾಣೆಯಲ್ಲಿ ಇನ್ಸ್ಪೆಕ್ಟರ್ ಗೋವಿಂದರಾಜು ಅವರ ಮಾರ್ಗದರ್ಶನದಲ್ಲಿ ಪಟ್ಟಣ ವ್ಯಾಪ್ತಿಗೆ ಒಳಪಡುವ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರ ಸಭೆ ನಡೆಸಿ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಈಚೆಗೆ ಮಂಗಳೂರು ಹಾಗೂ ಬೀದರ್ ನಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣಗಳು ಮತ್ತೆ ಮರುಕಳಿಸಿದಂತೆ ಎಚ್ಚರ ವಹಿಸಲು ಪ್ರತಿಯೊಂದು ಬ್ಯಾಂಕ್ ನಲ್ಲಿಯೂ ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಿರಬೇಕು ಕೆಲವೊಂದು ಸಂದರ್ಭ ಸಿಸಿ ಕ್ಯಾಮರಾ ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ಶೀಘ್ರ ಸರಿಪಡಿಸಿಕೊಳ್ಳಬೇಕು, ಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿ ಕಡ್ಡಾಯ ಬಂದೂಕು ತರಬೇತಿ ಪಡೆದಿರಬೇಕು, ಬ್ಯಾಂಕ್ ಸುತ್ತಮುತ್ತ ಅಪರಿಚಿತ ವ್ಯಕ್ತಿಗಳ ಚಲನವಲನ ಕಂಡುಬಂದರೆ ಶೀಘ್ರ ಆರಕ್ಷಕ ಠಾಣೆಗೆ ಮಾಹಿತಿ ನೀಡಬೇಕು, ಸುರಕ್ಷತಾ ಕ್ರಮಗಳು ಹಾಗೂ ಸ್ಥಳಿಯ ಆರಕ್ಷಕ ಠಾಣೆ ದೂರವಾಣಿ ಮಾಹಿತಿ ನಾಮಫಲಕ ಅಳವಡಿಸಿರಬೇಕು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಆರಕ್ಷಕ ಸಿಬ್ಬಂದಿ ಗಣೇಶ್, ಅಶ್ವಿನಿ, ಪುನೀತ್ ಮತ್ತು ಪಟ್ಟಣದ ವಿವಿಧ ಬ್ಯಾಂಕ್ ವ್ಯವಸ್ಥಾಪಕರು ಇದ್ದರು.