ಹಾಸನ : ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಕಲ್ಲು ಹಾಗೂ ಲಾಂಗ್ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಯಸಳೂರು ಪೊಲೀಸ್ ಠಾಣೆಯ ಶರತ್ ಹಲ್ಲೆಗೊಳಗಾದ ಕಾನ್ಸ್ಟೇಬಲ್.
ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೂಕಿನ ಮಳಲಿ ದೇವಸ್ಥಾನದಲ್ಲಿ ಹೊಳೆನರಸೀಪುರ ತಾಲ್ಲೂಕಿನ ಕುಂದೂರು ಹೋಬಳಿ ಎಸ್. ಹೊನ್ನೇನಹಳ್ಳಿ ಗ್ರಾಮದ ಶರತ್ ಮೇಲೆ ಹಲ್ಲೆ ನಡೆದಿದೆ. ಜೂನ್ 15 ರಂದು ಸಾಂದರ್ಭಿಕ ರಜೆ ಪಡೆದು ತಮ್ಮ ಗ್ರಾಮದ ದೀಪಕ್ ಎಂಬುವವರ ಮಗಳ ಹುಟ್ಟಹಬ್ಬದ ಕಾರ್ಯಕ್ರಮಕ್ಕೆ ಮಳಲಿ ದೇವಸ್ಥಾನಕ್ಕೆ ಶರತ್ ಬಂದಿದ್ದರು. ದೇವಸ್ಥಾನದ ಬಳಿಯಿರುವ ಕನ್ವೆನ್ಷನ್ ಹಾಲ್ ಮುಂಭಾಗ ಚೇತನ್ ಎಂಬ ಯುವಕನಿಗೆ ಗ್ರಾಮದ ಯುವಕರ ಗುಂಪು ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡುತ್ತಿತ್ತು.
ಈ ವೇಳೆ ಕಾನ್ಸ್ಟೇಬಲ್ ಶರತ್ ಜಗಳ ಬಿಡಿಸಲು ಹೋಗಿದ್ದಾರೆ. ಪೊಲೀಸ್ ಪೇದೆ ಮೇಲೆ ಲಾಂಗ್ ನಿಂದ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಿಥುನ್, ಲೋಹಿತ್, ನಟರಾಜು ಹಾಗೂ ಇತರರ ಗುಂಪು ಕಾನ್ಸ್ ಟೇಬಲ್ ಶರತ್ ಅವರಿಗೂ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದೆ. ಕಲ್ಲಿನಿಂದ ಶರತ್ ತಲೆಗೆ ಹೊಡೆದಿದ್ದಾರೆ, ಬಳಿಕ ನಟರಾಜ ಕಾರಿನಿಂದ ಲಾಂಗ್ ತಂದು ಅದರಿಂದಲೂ ಹಲ್ಲೆ ಮಾಡಿದ್ದಾನೆ. ಈ ವೇಳೆ ಕಾನ್ಸ್ಟೇಬಲ್ ಶರತ್ ತಮ್ಮನ್ನು ರಕ್ಷಿಸಿಕೊಳ್ಳಲು ಕನ್ವೆನ್ಷನ್ ಹಾಲ್ ಒಳಗೆ ಓಡಿ ಹೋಗಿದ್ದಾರೆ.
ಆದರೆ ಕನ್ವೆನ್ಷನ್ ಹಾಲ್ ಒಳಗೂ ನುಗ್ಗಿಬಂದ ದ ಪುಂಡರ ಗುಂಪು ಲಾಂಗ್ ನಿಂದ ಮನಬಂದಂತೆ ಶರತ್ ಮೇಲೆ ಹಲ್ಲೆ ನಡೆಸಿದ್ದಾರೆ. ಕಾನ್ಸ್ ಟೇಬಲ್ ಶರತ್ ಹಾಲ್ ನಲ್ಲೇ ಕುಸಿದು ಬಿದ್ದಿದ್ದಾರೆ. ಗಾಯಾಳು ಶರತ್ ಸದ್ಯಕ್ಕೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.