ಮಂಡ್ಯ: ಮಂಡ್ಯ ರೈಲು ನಿಲ್ದಾಣದಲ್ಲಿ ಇಂದು ಬೆಳಗ್ಗೆ ದಾರುಣ ಘಟನೆಯೊಂದು ನಡೆದಿದೆ. ರೈಲು ನಿಲ್ದಾಣದ ರೈಲ್ವೆ ಮೇಲ್ಸೇತುವೆ ಬಳಿ ಹಳಿ ದಾಟುವ ವೇಳೆ ಹಂಪಿ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಸಾವನಪ್ಪಿರುವ ಘಟನೆ ನಡೆದಿದೆ. ರೈಲಿಗೆ ಸಿಲುಕಿ ಸಾವನಪ್ಪಿರುವ ಯುವತಿ ಸ್ವರ್ಣಸಂದ್ರ ಬಡಾವಣೆಯ 24 ವರ್ಷದ ರಮ್ಯಾ ಅವರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಎಂಕಾಂನಲ್ಲಿ ಚಿನ್ನದ ಪದಕ ಪಡೆದಿದ್ದ ರಮ್ಯಾ ಅವರು ಬೆಂಗಳೂರಲ್ಲಿ ಅಕೌಂಟೆಂಟ್ ಟ್ರೈನಿಂಗ್ ಮಾಡುತ್ತಾ ಇದ್ದರು. ಪ್ರತಿನಿತ್ಯ ಮಂಡ್ಯದಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದರು. ಇಂದು ರಮ್ಯಾ ಅವರು ಹಳಿ ದಾಟುತ್ತಿದ್ದಾಗ ರೈಲಿಗೆ ಸಿಲುಕಿದ ಯುವತಿಯ ದೇಹ ಛಿದ್ರಗೊಂಡಿದೆ. ಹಂಪಿ ಎಕ್ಸ್ಪ್ರೆಸ್ ರೈಲು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು.
ರೈಲು ನಿಲ್ದಾಣದ ರೈಲ್ವೆ ಮೇಲ್ಸೇತುವೆ ಬಳಿ ಹಳಿ ದಾಟುವ ವೇಳೆ ಈ ದುರಂತ ಸಂಭವಿಸಿದೆ. ರೈಲ್ವೆ ಹಳಿ ದಾಟುವ ವೇಳೆ ಮೈಸೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ಪ್ರೆಸ್ ರೈಲು ಗುದ್ದಿದೆ. ಸ್ಥಳಕ್ಕೆ ಮಂಡ್ಯ ರೈಲ್ವೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದರು. ಮೃತ ಯುವತಿ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.