ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ಚೀಟಿ ಹಣದ ವಿಚಾರವಾಗಿ ನಡೆದ ಗಲಾಟೆ ಹತ್ಯೆಗೆ ಕಾರಣವಾದ ದುರ್ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಸಂಜು ನಾಯ್ಕ (27) ಎಂದು ಗುರುತಿಸಲಾಗಿದ್ದು, ಆರೋಪಿಯಾಗಿ ರುದ್ರೇಶ್ ನಾಯ್ಕ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಮೃತಾಪುರದ ಸೇವಾಲಾಲ್ ಸಂಘದ ಚೀಟಿ ವ್ಯವಹಾರದಲ್ಲಿ ಈ ಇಬ್ಬರ ನಡುವೆ ಗಲಾಟೆ ಉಂಟಾಗಿದೆ. ಸಂಘದ ಚೀಟಿ ವ್ಯವಹಾರದಲ್ಲಿ ಸಂಜು ನಾಯ್ಕ ನಿಯಮ ಬಾಹಿರವಾಗಿ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ ಸದಸ್ಯರು ಅವನನ್ನು ಚೀಟಿಯಿಂದ ನಿರ್ಗಮಿಸಿ ಹಾಕಿದ್ದರು. ಆದರೆ ಸಂಜು ಚೀಟಿ ದಿನ ಸಭೆಗೆ ಬಂದು ಮತ್ತೆ ಸದಸ್ಯರೊಂದಿಗೆ ಜಗಳ ಆರಂಭಿಸಿದ್ದ.
ಜಗಳದ ವೇಳೆ ರುದ್ರೇಶ್, ಸಂಜುನ ತಲೆಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ಸಂಜು ಸ್ಥಳದಲ್ಲೇ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದ ಅವಿನಾಶ್ ಎಂಬ ಯುವಕನಿಗೂ ರುದ್ರೇಶ್ ಕಚ್ಚಿದ ಪರಿಣಾಮ ಅವನು ಕೂಡ ಗಾಯಗೊಂಡಿದ್ದಾನೆ.
ತರೀಕೆರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರೆಸುತ್ತಿದ್ದಾರೆ. ಈ ಘಟನೆ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.