ಮಂಗಳೂರು (ದಕ್ಷಿಣ ಕನ್ನಡ): ನನ್ನ ವೈಯಕ್ತಿಕ ಬೇಜಾವಾಬ್ದಾರಿಯಿಂದ 164 ಮಂದಿ ಉಮ್ರಾ ಯಾತ್ರಿಗಳಿಗೆ ತೊಂದರೆಯಾಗಿದ್ದು ನಿಜ. ನನ್ನಿಂದ ತಪ್ಪಾಗಿದ್ದು ನಿಜ. ಇದಕ್ಕಾಗಿ ನಾನು ಕ್ಷಮೆಯಾಚಿಸ್ತೀನಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಬಕದ ಮುಹಮ್ಮದೀಯಾ ಉಮ್ರಾ ಗ್ರೂಪ್ ನ ಮಾಲಕ, ಅಮೀರ್ ಅಶ್ರಫ್ ಸಖಾಫಿ ಪರ್ಪುಂಜ ಹೇಳಿದ್ದಾರೆ.
ಅವರು ಶನಿವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಡಿಸೆಂಬರ್ 14 ಕ್ಕೆ ನನ್ನ ಸಂಸ್ಥೆಯ ಹೆಸರಲ್ಲಿ ಕ್ಯಾಲಿಕಟ್ ಏರ್ ಪೋರ್ಟ್ ನಿಂದ 164 ಮಂದಿಯನ್ನು ಕರೆದುಕೊಂಡು ಜಿದ್ದಾ ಏರ್ ಪೋರ್ಟ್ ಗೆ ತೆರಳಿ ಅಲ್ಲಿಂದ ಪವಿತ್ರ ಮಕ್ಕಾಕ್ಕೆ ಉಮ್ರಾ ಮಾಡಲು ತೆರಳಿದ್ದೆ. ಮಕ್ಕಾದಲ್ಲಿ 10 ದಿನಗಳ ಕಾಲ ತಂಗಿ ಅಲ್ಲಿನ ಆರಾಧನಾ ಕರ್ಮಗಳನ್ನು ಮುಗಿಸಿ ಮದೀನಾಕ್ಕೆ ಹೋಗಿದ್ದು ಅಲ್ಲಿ ಆರು ದಿನಗಳ ಕಾಲ ತಂಡ ಉಳಿದಿತ್ತು. ಅಲ್ಲಿಂದ ಮರಳುವ ಸಂದರ್ಭದಲ್ಲಿ ಯಾತ್ರಾರ್ಥಿಗಳ ವಾಸ್ತವ್ಯ, ಆಹಾರ ಹಾಗೂ ಹಿಂದಿರುಗಿ ಬರುವ ಟಿಕೆಟ್ ನ ಕಾರ್ಯದಲ್ಲಿ ತಾಂತ್ರಿಕ ಕಾರಣಗಳಿಂದ ಸ್ವಲ್ಪ ವ್ಯತ್ಯಯ ಉಂಟಾಯ್ತು. ಇದರಿಂದ ಯಾತ್ರಾರ್ಥಿಗಳಿಗೆ ಮತ್ತು ಅವರ ಕುಟುಂಬಕ್ಕೆ ತೀವ್ರ ತೊಂದರೆ ಉಂಟಾಗಿದ್ದಾಗಿ ನನಗೆ ಗಮನಕ್ಕೆ ಬಂದಿದೆ. ಇದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದರು.
ಈ ಘಟನೆಗಳು ಸಂಭವಿಸಿದ್ದು ಕೇವಲ ನನ್ನ ವೈಯಕ್ತಿಕ ಬೇಜಾವಾಬ್ದಾರಿಯ ಕಾರಣದಿಂದಲೇ ಹೊರತು ಇದಕ್ಕೆ ಬೇರೆ ಯಾರೂ ಜವಾಬ್ದಾರರಲ್ಲ. ಈ ಬಗ್ಗೆ ‘ಕರ್ನಾಟಕ ಸಖಾಫಿ ಕೌನ್ಸಿಲ್’ ನನ್ನನ್ನು ನೇರವಾಗಿ ಕಚೇರಿಗೆ ಕರೆದು ವಿಚಾರಿಸಿದ್ದು ನನ್ನಿಂದ ಉಂಟಾದ ಪ್ರಮಾದಗಳನ್ನು ಅವರ ಮುಂದೆ ಒಪ್ಪಿಕೊಂಡಿರುತ್ತೇನೆ. ಮುಂದೆ ಅಂತಹ ಅವ್ಯವಸ್ಥೆಗಳು ನಡೆಯದಂತೆ ಗರಿಷ್ಠ ಎಚ್ಚರ ವಹಿಸುವುದಾಗಿ ಅವರ ಮುಂದೆ ಮಾತು ಕೊಟ್ಟಿರುತ್ತೇನೆ ಎಂದರು.
ನಡೆದು ಹೋಗಿರುವ ಈ ದುರ್ಘಟನೆಗಳಲ್ಲಿ ನಾನು ತೀವ್ರವಾಗಿ ನೊಂದಿದ್ದು ಇದರಿಂದ ಸಂಕಷ್ಟಕಕ್ಕೆ ಒಳಗಾದ ಎಲ್ಲರೊಂದಿಗೂ ನಾನು ಕ್ಷಮೆ ಯಾಚಿಸುತ್ತೇನೆ. ಹಲವು ವ್ಯಕ್ತಿಗಳು ಮರಳಿ ಬರುವ ಟಿಕೆಟ್ ಗಳಿಗೆ ಇತರ ದಾನಿಗಳು ಹಾಗೂ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿದ್ದು ಅಂತಹರಿಗೆ ಸದರಿ ಹಣವನ್ನು ಪಾವತಿಸಲು ನಾನು ಬದ್ಧನಾಗಿರುವುದಾಗಿ ಸಂಬಂಧ ಪಟ್ಟವರ ಗಮನಕ್ಕೆ ಕೊಡುತ್ತಿದ್ದೇನೆ.ಈ ವಿಷಯವು ಸಂಪೂರ್ಣವಾಗಿ ನನ್ನ ವೈಯಕ್ತಿಕ ಕಾರ್ಯವಾಗಿದ್ದು ಇದಕ್ಕೆ ಯಾರೂ ಉಲಮಾ ವರ್ಗವನ್ನಾಗಲೀ, ಸಖಾಫಿ ಸಮೂಹ ವನ್ನಾಗಲೀ, ನಮ್ಮೆಲ್ಲರ ಗುರುವರ್ಯರಾದ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದರನ್ನಾಗಲೀ ಎಳೆದು ತರಬಾರದಾಗಿ ವಿನಂತಿಸಿ ಕೊಳ್ಳುತ್ತೇನೆ ಎಂದಿದ್ದಾರೆ.