ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಕಾವೇರಿ ಪ್ರಾಧಿಕಾರಗಳನ್ನು ರದ್ದುಗೊಳಿಸಿ ಚುನಾವಣಾ ಆಯೋಗದ ಮಾದರಿಯಲ್ಲಿ ಸ್ವತಂತ್ರ ಸಮಿತಿಯೊಂದನ್ನು ರಚಿಸಬೇಕು ಎಂದು ರೈತ ನಾಯಕ ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಸುಪ್ರೀಂಕೋರ್ಟ್ ಮುಂದೆ ಮರುಪರಿಶೀಲನೆ ಅರ್ಜಿ ಹಾಕಬೇಕು. ಕಾವೇರಿ ನಿರ್ವಹಣಾ ಮಂಡಳಿ, ಪ್ರಾಧಿಕಾರ, ಸರ್ಕಾರಗಳಿಂದ ವಾಸ್ತವ ತಲುಪುತ್ತಿಲ್ಲ. ಹಾಗಾಗಿ ಮಂಡಳಿ, ಪ್ರಾಧಿಕಾರ ರದ್ದುಪಡಿಸಿ ನಾಲ್ಕು ರಾಜ್ಯಗಳ ತಜ್ಞರು, ಪರಿಣಿತರನ್ನು ಒಳಗೊಂಡ ಸಮಿತಿ ರಚಿಸಬೇಕು. ಚುನಾವಣಾ ಆಯೋಗದ ರೀತಿ ಸ್ವತಂತ್ರ ಸಮಿತಿ ರಚನೆಯಾಗಬೇಕು. ರಾಜ್ಯದಿಂದ ರಾಜ್ಯಸಭೆಗೆ ಕರ್ನಾಟಕದವರೇ ಆಯ್ಕೆಯಾಗಬೇಕು. ರಾಜ್ಯದ ಪರ ದನಿ ಎತ್ತುವಂತವರಾಗಬೇಕು. ನಿರ್ಮಲಾ ಸೀತಾರಾಮನ್ ನಡೆ ರಾಜ್ಯದ ದೌರ್ಭಾಗ್ಯ ಎಂದರು. ಮುಂದಿನ ಹೋರಾಟ ಹೇಗಿರಬೇಕು, ಇಡೀ ರಾಜ್ಯ ಬಂದ್ ಬದಲು, ಕಾವೇರಿ ಕೊಳ್ಳದ ಬಂದ್?ಗೆ ಕರೆ ಕೊಡಬೇಕು ಎನ್ನುವ ಅಭಿಪ್ರಾಯ ಸಲ್ಲಿಸಿದರು.
ಹೋರಾಟಗಾರರ ಮೇಲೆ ಕೇಸು ಹಾಕಬಾರದು. ಈ ಹಿಂದೆ ಹೋರಾಟದಲ್ಲಿ ಕೇಸು ಹಾಕಿದ್ದರು. ಇದರಿಂದಾಗಿ ಹೋರಾಟಕ್ಕೆ ಮುಂದಾಗಲು ಜನರು ಹಿಂದೇಟು ಹಾಕಬಾರದು. ಕೂಡಲೇ ಸರ್ಕಾರ ಕೇಸು ಹಾಕಲ್ಲ ಎನ್ನುವ ನಿರ್ಧಾರ ಪ್ರಕಟಿಸಬೇಕು. ಕೇಸು ಹಾಕಿದರೆ ರಾಜ್ಯ ವಿರೋಧಿ ಎನ್ನುವ ನಿಲುವನ್ನು ನಾವು ತಳೆಯಬೇಕು ಎಂದರು.
ಜನತಾದಳದ ಕುಮಾರ್ ಮಾತನಾಡಿ, ಶಾಂತ ಸ್ವಭಾವದ ಹೋರಾಟದಿಂದ ಏನೂ ಆಗಲ್ಲ. ಶಾಂತ ಸ್ವರೂಪದ ಹೋರಾಟ ಬೇಡ, ಉಗ್ರ ಹೋರಾಟ ನಡೆಸೋಣ, ನಮ್ಮ ಪರ ಮಾತನಾಡುವವರು ಯಾರೂ ಇಲ್ಲ, ಈಗಿನ ಮುಖ್ಯಮಂತ್ರಿಗಳು ಒಳಗೊಳಗೆ ನೀರು ಬಿಟ್ಟಿರುವುದನ್ನು ನೋಡಿದರೆ ಮುಂದಿನ ಚುನಾವಣೆ ಪರವಾಗಿದ್ದಾರೆ ಎನಿಸುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ನಾವು ಶಾಂತವಾಗಿ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ಯಾರೋ ಮಳೆ ಬರಲಿದೆ, ಡ್ಯಾಂ ತುಂಬಲಿದೆ ಎಂದು ಭವಿಷ್ಯ ಹೇಳಿದ್ದಾರಂತೆ. ಅದಕ್ಕೆ ಇವರು ನೀರು ಬಿಟ್ಟಿದ್ದಾರಂತೆ ಎಂದು ಕಿಡಿಕಾರಿದ ಕುಮಾರ್, ಅಧಿವೇಶನದಲ್ಲಿ ಸಂಕಷ್ಟ ಸೂತ್ರ ಇಲ್ಲ. ಸೌಹಾರ್ದಯುತ ಚರ್ಚೆ ಮಾಡೋಣ ಎಂದು ನಮ್ಮ ಎಲ್ಲ ಸಂಸದರು ಒತ್ತಾಯಿಸಬೇಕು. ಬೆಂಗಳೂರಿಗೆ ಬಂದಿರುವ ವಲಸಿಗರನ್ನು ನಾವು ತಲುಪಬೇಕು. ಅವರೂ ನೀರು ಬಳಸುತ್ತಿದ್ದಾರೆ, ನಮ್ಮ ರೈತರಿಗೆ ಬೆಳೆಗೆ ನೀರಿಲ್ಲ. ನಿಮಗೆಲ್ಲಾ ಪೋಲು ಮಾಡಲು ನೀರು ಇದೆ. ಅವರನ್ನೂ ಹೋರಾಟಕ್ಕೆ ಕರೆಸಬೇಕು. ಈ ಬಗ್ಗೆ ತಿಳುವಳಿಕೆ ಮೂಡಿಸಬೇಕು, ನಾವು ಮಾತ್ರ ಹೋರಾಟ ಮಾಡಬೇಕು. ವಲಸಿಗರು ಕೂತು ತಿನ್ನಬೇಕಾ? ಕಾವೇರಿ ನೀರು ಕುಡಿಯುತ್ತಿರುವ ಎಲ್ಲರನ್ನೂ ಹೋರಾಟಕ್ಕೆ ಕರೆಯೋಣ ಎಂದು ಹೇಳಿದರು.