ಬೆಂಗಳೂರು: ಬಿಜೆಪಿಯ ಮೈಸೂರು ಸಂಸದ ಪ್ರತಾಪಸಿಂಹ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರ ಸಹೋದರ ಜಮೀನಿನಲ್ಲಿ ಮರ ಕಡಿದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಹಾಸನದ ಗೆಂಡೆಕಟ್ಟೆ ಅರಣ್ಯದಿಂದ ಬೀಟೆ ಮರ ಕಡಿದು ಬೇಲೂರಿನಲ್ಲಿರುವ ಪ್ರತಾಪ್ ಸಿಂಹ ಸಹೋದರನ ಗುತ್ತಿಗೆ ಪಡೆದ ಜಮೀನಿನಲ್ಲಿ ಹಾಕಿಸಲು ಸಿದ್ದರಾಮಯ್ಯ ಸೂಚನೆ ಹೊಟ್ಟಿದ್ದಾರೆ ಎಂದು ಆರೋಪಿಸಿದರು.
ಪ್ರತಾಪ್ ಸಿಂಹ ತೇಜೋವಧೆ ಮಾಡಲು ಅಧಿಕಾರಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಪ್ರತಾಪ್ ಸಿಂಹ ಸಹೋದರನಿಗೂ ಮರಕಡಿದ ವಿಚಾರಕ್ಕೂ ಸಂಬಂಧವಿಲ್ಲ. ಯಾರು ಯಾರಿಗೆ ಕರೆ ಮಾಡಿದ್ದರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಕಾಲ್ ಡೀಟೆಲ್ಸ್ ತೆಗೆಸಿದ್ರೆ ಎಲ್ಲವೂ ಗೊತ್ತಾಗುತ್ತೆ ಎಂದು ಕುಮಾರಸ್ವಾಮಿ ಹೇಳಿದರು.
ಹೆಚ್ ಡಿ ದೇವೇಗೌಡರ ಹೇಳಿಕೆಯನ್ನು ಸಮರ್ಥಿಸಿದ ಕುಮಾರಸ್ವಾಮಿ, ರಾಷ್ಟ್ರೀಯ ಅಧ್ಯಕ್ಷರು ರೈತರಿಗೆ ಆಗಿರುವ ಅನ್ಯಾಯ ಲೋಪದೋಷಗಳ ಬಗ್ಗೆ ಮಾತನಾಡಿದ್ದಾರೆ. ಸರ್ಕಾರ ಅಕ್ರಮಗಳನ್ನ ತಡೆಯುವಲ್ಲಿ ಕ್ರಮವಹಿಸಿಲ್ಲ. ರಾಜ್ಯದಲ್ಲಿ ಅಧಿಕಾರ ದುರ್ಬಳಕೆಯಾಗುತ್ತಿದ್ದು, ಸಾರ್ವಜನಿಕವಾಗಿ ಮಾದ್ಯಮಗಳಲ್ಲೂ ಸಹ ಕಳೆದ ಎರಡು ತಿಂಗಳಿಂದ ಬೇರೆ ಯಾವ ವಿಷಯಗಳಿಗೆ ಗಮನ ಕೊಡೊಕೆ ಆಗ್ತಿಲ್ಲ. ಹುಬ್ಬಳ್ಳಿಯಲ್ಲಿ ಸುಮಾರು 30 ವರ್ಷಗಳ ಪ್ರಕರಣಗಳಿಗೆ ಸಂಬಂದಿಸಿದ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನವಾಗಿದೆ. ನಮ್ಮಎನ್ಡಿಎ ಪಕ್ಷದ ಬಿಜೆಪಿ ನಾಯಕರು ಕರಸೇವಕರ ಪರ ಹೋರಾಟ ಮಾಡುತ್ತಿದ್ದಾರೆ. ಗುಜಾರತ್ ನಲ್ಲಿ ನಡೆದ ಕರಸೇವಕರ ಮೇಲೆ ಆದಂತಹ ದೊಂಬಿ ಇಲ್ಲಿ ಆಗುತ್ತೆ ಎಂದು ಎಮ್ಎಲ್ಸಿ ಒಬ್ಬರು ಹೇಳಿದ್ದಾರೆ. ಅಧಿಕಾರ ದುರ್ಬಳಕೆ ಈ ಸರ್ಕಾರ ಬಂದ ಮೇಲೆ ಆಗ್ತಿದೆ ಎಂದು ಟೀಕಿಸಿದರು.