ಬೆಳ್ತಂಗಡಿ: ಕಂಟೈನರ್ ಲಾರಿ ಹಾಗೂ ಇನ್ನೋವಾ ಕಾರು ನಡುವೆ ಸಂಭವಿಸಿರುವ ಅಪಘಾತದಲ್ಲಿ ತಾಯಿ-ಮಗ ಮೃತಪಟ್ಟ ಘಟನೆ ಇಂದ ಮಂಗಳವಾರ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಘಾಟ್ ನಲ್ಲಿ ನಡೆದಿದೆ.
ಪಾಣೆಮಂಗಳೂರು ಸಮೀಪದ ಬೊಂಡಾಲ ನಿವಾಸಿಗಳಾದ ಶಬೀರ್ ಎಂಬವರ ಪತ್ನಿ ಸಫಿಯಾ(೫೦) ಹಾಗೂ ಅವರ ಪುತ್ರ ಮುಹಮ್ಮದ್ ಶಫೀಕ್(೨೦) ಮೃತಪಟ್ಟವರು.
ಇವರ ಕುಟುಂವವು ಬೆಂಗಳೂರಿನಲ್ಲಿ ಸಂಬಂಧಿಕರೋರ್ವರ ಮದುವೆ ಔತಣಕೂಟದಲ್ಲಿ ಭಾಗವಹಿಸಿ, ಮಂಗಳೂರು ಕಡೆಗೆ ಹಿಂದಿರುಗುತ್ತಿದ್ದರು. ಕಾರು ಶಿರಾಡಿ ಘಾಟ್ ನ ಕೆಂಪುಹೊಳೆ ಸಮೀಪ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಕಂಟೈನರ್ ಲಾರಿ ಢಿಕ್ಕಿ ಹೊಡೆದಿದೆ ಈ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಮಕ್ಕಳ ಸಹಿತ ಇತರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಎಲ್ಲರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.