ಮಂಗಳೂರು (ದಕ್ಷಿಣ ಕನ್ನಡ) ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹಲವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಮಾಡಲು ಬ್ರಹ್ಮಾವರ ಪೊಲೀಸರು ತಿಮರೋಡಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗಿರೀಶ್ ಮಟ್ಟಣ್ಣನವರ್, ಜಯಂತ್ ಮತ್ತು ಇತರರು ಪೊಲೀಸರಿಗೆ ಅಡ್ಡಿ ಪಡಿಸಿದ್ದರು. ಈ ಕಾರಣಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ನಂತರ ವಿಚಾರಣೆಗೆ ಹಾಜರಾಗಲು ಬೆಳ್ತಂಗಡಿ ಎಸ್ಐಟಿ ಠಾಣೆಗೆ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದರು. ಕೆಲ ಕಾಲ ಪೊಲೀಸರು ವಿಚಾರಣೆ ನಡೆಸಿ ಮಟ್ಟಣ್ಣನವರ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮಗೆ ಕೋರ್ಟ್, ಸ್ಟೇಷನ್ ಬೀಗರ ಮನೆಯಾಗಿದೆ. ನಿನ್ನೆ ತಿಮರೋಡಿ ಬಂಧನಕ್ಕೆ100 ಜನ ಪೊಲೀಸರು ಬಂದಿದ್ದರು. ಮನೆಯವರು ಏಕೆ ಬಂದಿದ್ದೀರಾ ಅಂತ ಕೇಳಿದ್ದಾರೆ ಅಷ್ಟೇ. ನಾವು ಯಾರೂ ಪೊಲೀಸರಿಗೆ ಅಡ್ಡಿ ಮಾಡಿಲ್ಲ ಎಂದು ತಿಳಿಸಿದರು.
ಇವತ್ತು 30 ಜನರ ಮೇಲೆ ಕೇಸ್ ಅಂತ ಸುದ್ದಿ ಬಂದಿದೆ. ನಾನು ಕೇಳಲು ಬಂದಿದ್ದೇನೆ, ಬಂಧನ ಮಾಡೋದಾದ್ರೆ ಮಾಡಲಿ. ಸುಮ್ಮನೆ, ಪೆಟ್ರೋಲ್ ಡಿಸೇಲ್ ಏಕೆ ಖರ್ಚು ಮಾಡಬೇಕು? ನಾನೇ ಬಂದಿದ್ದೇನೆ ಅರೆಸ್ಟ್ ಮಾಡೋದಾದ್ರೆ ಮಾಡಲಿ ಎಂದರು.
– ಗಿರೀಶ್ ಮಟ್ಟಣ್ಣನವರ್, ಹೋರಾಟಗಾರ