ಮೈಸೂರು: ಕಲೆ, ಸಾಹಿತ್ಯ, ಸಂಗೀತ, ನೃತ್ಯ, ವಿಜ್ಞಾನ, ಕ್ರೀಡೆ, ಶಿಕ್ಷಣ, ಜನಪದ, ವೈದ್ಯಕೀಯ, ರಾಜಕೀಯ, ಹೋರಾಟ, ಕೃಷಿ, ಸಮಾಜ ಸೇವೆ ಸೇರಿದಂತೆ ಅದು ಯಾವುದೇ ಕ್ಷೇತ್ರವಿರಲಿ ಇಲ್ಲಿ ಪ್ರಶಸ್ತಿ, ಪುರಸ್ಕಾರ, ಮಾನ ಸನ್ಮಾನ, ಗೌರವಕ್ಕೆ ಸಾಧಕರನ್ನು ಆಯ್ಕೆ ಮಾಡುವಾಗ ಸಾಧನೆ ಮಾತ್ರ ಮಾನದಂಡ ಆಗಬೇಕೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರು ಹೇಳಿದರು.
ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ನಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿ ಗೆ ಪ್ರತಿಭಾ ಪುರಸ್ಕಾರ ಹಾಗು ಜಾದು ಕಲಾವಿದೆ ಸುಮಾ ರಾಜ್ ಕುಮಾರ್ ಅವರಿಗೆ ‘ಕನ್ನಡಾಂಬೆ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅದು ಯಾರೇ ಆಗಿರಲಿ, ಯಾವುದೇ ರಂಗವಿರಲಿ, ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸೇವೆ ಮಾಡುತ್ತಿರುವ ಸಾಧಕರನ್ನು ಪ್ರಶಸ್ತಿ ಪುರಸ್ಕಾರಗಳು, ಸನ್ಮಾನ ಗೌರವಗಳು ಹುಡುಕಿಕೊಂಡು ಹೋದಾಗಲೇ ಪ್ರಶಸ್ತಿ ಪುರಸ್ಕಾರಗಳಿಗೆ ನಿಜವಾದ ಗೌರವ ಬರುವುದೆಂದರು.
ಕನ್ನಡಾಂಬೆ ರಕ್ಷಣಾ ವೇದಿಕೆಯು ರಾಜ್ಯ ಮಟ್ಟದಲ್ಲಿ ಕೊಡಮಾಡುತ್ತಿರುವ “ಕನ್ನಡಾಂಬೆ ರತ್ನ ಪ್ರಶಸ್ತಿ”ಗೆ ಭಾಜನರಾಗಿರುವ ಬಹುಮುಖ ಪ್ರತಿಭೆಯ ಖ್ಯಾತ ಜಾದು ಕಲಾ ವಿದೆ ಸುಮಾ ರಾಜಕುಮಾರ್ ಅಕ್ಷರಶಃ ನಿಜ ಸಾಧಕಿಯಾಗಿದ್ದು ಕನ್ನಡ ಕಲಾ ಜಗತ್ತನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಮೈಸೂರಿಗರ ಹೆಮ್ಮೆಯಂತಿ ತಿರುವ ಇವರಿಗೆ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆಯೆಂದ ಅವರು, ಹೀಗೆ ಪ್ರಶಸ್ತಿ-ಪುರಸ್ಕಾರಗಳನ್ನು ಕೊಡುವವರು ಮತ್ತು ಪಡೆಯುವವರು ಇಬ್ಬರೂ ಅರ್ಹರಾಗಿದ್ದಲ್ಲಿ ಮಾತ್ರ ಅದು ಸಾರ್ಥಕ್ಯವಾಗಿರುತ್ತದೆಂದು ತಿಳಿಸಿದರು.
ಇದಕ್ಕೂ ಮುನ್ನ ಸುಮಾ ರಾಜಕುಮಾರ್ ಅವರಿಗೆ ಕನ್ನಡಾಂಬೆ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರನ್ನು ಗೌರವಿಸುವು ದರ ಜೊತೆಗೆ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿ ಮಾತನಾಡಿದ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಹಾಗು ಚಿತ್ರ ನಟ ಜಯಪ್ರಕಾಶ್ ಅವರು, ಖಾಸಗಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವುದು ದೊಡ್ಡ ವಿಷಯವೇನಲ್ಲ. ಆದರೆ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವುದು ಬಹು ದೊಡ್ಡ ವಿಷಯವಾಗುತ್ತದೆ. ಹಾಗಾಗಿ ಸರ್ಕಾರಿ ಶಾಲೆಯ ಮಕ್ಕಳನ್ನು ಸ್ವಲ್ಪ ಹೆಚ್ಚಾಗಿ ಉತ್ತೇಜಿಸ ಬೇಕೆಂದು ಹೇಳಿ ಎಲ್ಲರನ್ನೂ ಅಭಿನಂದಿಸಿದರು. ಪ್ರಾರಂಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಕೆ ಲೀಲಾಪ್ರಕಾಶ್, ಮೈಸೂರು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಅಧ್ಯಕ್ಷೆ ಸುಶೀಲಮ್ಮ, ವೇದಿಕೆಯ ಕಾರ್ಯಾಧ್ಯಕ್ಷೆ ರೂಪ, ಉಪಪ್ರಾಂಶುಪಾಲ ರಾದ ಪ್ರಭಾ, ಮುಖಂಡ ಮೆಲ್ಲಹಳ್ಳಿ ಮಹದೇವ ಸ್ವಾಮಿ, ಶಿಕ್ಷಕಿ ಸಂಗೀತಾ, ವಕೀಲ ದಿನೇಶ್, ಡಿಪಿಕೆ ಪರಮೇಶ್, ಸುರೇಶ್ ಗೋಲ್ಡ್, ಕರೀಗೌಡ, ಬಸವರಾಜೇಂದ್ರಸ್ವಾಮಿ ಹಾಗು ಅಜಯ್ ಶೆಟ್ಟಿ ಮುಂತಾದವರಿದ್ದರು.