ಮಂಗಳೂರು: ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಕೈಗೆತ್ತಿಕೊಳ್ಳಲು ಇಲ್ಲಿ ಯಾರಿಗೂ ಅವಕಾಶ ಇಲ್ಲ. ಪೊಲೀಸರಿಗೆ ಇದಕ್ಕೆ ಅವಕಾಶ ಕೊಡಬೇಡಿ ಎಂದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರವಾಸಕ್ಕಾಗಿ ಬಜಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಉಡುಪಿ ಕಾಲೇಜು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೊಲೀಸರು ಸುಮೋಟೋ ಎಫ್ ಐಆರ್ ಮಾಡಿದ್ದಾರೆ, ಡಿವೈಎಸ್ಪಿ ತನಿಖೆ ಆಗುತ್ತಿದೆ. ಅದು ಮೊದಲು ನಡೆಯಲಿ. ರಾಷ್ಟ್ರೀಯ ಮಹಿಳಾ ಆಯೋಗವೇ ಅಲ್ಲಿ ಕ್ಯಾಮರಾ ಇಟ್ಟಿರಲಿಲ್ಲ ಎಂದಿದ್ದಾರೆ. ತನಿಖಾ ವರದಿ ಬರಲಿ, ಆಮೇಲೆ ಈ ಬಗ್ಗೆ ಮಾತನಾಡುವ ಎಂದರು.
ಗೃಹ ಸಚಿವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಲೇಜ್ ನಲ್ಲಿ ಇರುವ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು ಎಂದು ಗೃಹ ಸಚಿವರು ಹೇಳಿರಬಹುದು. ಎಫ್ ಐಆರ್ ಆಗಿ ತನಿಖೆ ಆಗುತ್ತಿದೆ. ಡಿವೈಎಸ್ಪಿ ಮಟ್ಟದ ತನಿಖೆ ಆಗುತ್ತಿರುವವಾಗ ಎಸ್ ಐಟಿ ಪ್ರಶ್ನೆ ಉದ್ಭವಿಸಲ್ಲ ಎಂದರು.
ಧರ್ಮಸ್ಥಳದ ಸೌಜನ್ಯ ಕೇಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕೇಸ್ ಸಿಬಿಐಗೆ ಕೊಟ್ಟಿತ್ತು, ಕೋರ್ಟಲ್ಲಿ ಇತ್ತು. ಅವರ ಪೋಷಕರು ಮರು ತನಿಖೆಗೆ ಮನವಿ ಮಾಡಿದ್ದಾರೆ. ಕಾನೂನು ಪ್ರಕಾರ ಏನಾಗಬೇಕೆಂದು ನೋಡಿ ಮುಂದಿನ ನಿರ್ಧಾರ ಮಾಡುತ್ತೇವೆ. ನಾನು ಲಾಯರ್ ಆಗಿ ಹೇಳುವುದಾದರೆ ಇದರ ಬಗ್ಗೆ ಹೈಕೋರ್ಟ್ ಗೆ ಮೇಲ್ಮನವಿ ಹಾಕಬೇಕು. ನಾನು ಸಿಬಿಐ ಕೋರ್ಟ್ ಜಡ್ಜ್ ಮೆಂಟ್ ನೋಡಿಲ್ಲ. ಅದರ ಜಡ್ಜ್ ಮೆಂಟ್ ಓದಿ ನೋಡ್ತೇನೆ, ಅಪೀಲ್ ಗೆ ಅವಕಾಶ ಇದೆಯಾ ಎಂದು ನೋಡುತ್ತೇನೆ ಎಂದರು.
ಟೀಕೆ ಮಾಡಬಹುದು ಎಂದರೆ ಏನು ಬೇಕಾದರೂ ಹೇಳಬಹುದು ಎಂದರ್ಥವಲ್ಲ. ಟೀಕೆ ಬೇರೆ, ಸುಳ್ಳು ಸುದ್ದಿ ಹರಡುವುದು ಬೇರೆ, ವೈಯಕ್ತಿಕ ತೇಜೋವಧೆ ಬೇರೆ. ಟೀಕೆ ಮಾಡಿದರೆ ಕ್ರಮ ಕೈಗೊಳ್ಳುವುದಿಲ್ಲ. ಆದರೆ ಸುಳ್ಳು ಸುದ್ದಿ ಹರಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ:
ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡೋದಿಲ್ಲ. ಇದನ್ನು ಅನೈತಿಕ ಪೊಲೀಸ್ ಗಿರಿ ಅಂತಾ ಕರೆಯಬೇಕಾಗುತ್ತದೆ ಎಂದು ಹೇಳಿದರು.
ಕಾನೂನನ್ನು ಕೈಗೆ ತೆಗೆದುಕೊಳ್ಳೋದು, ಹಲ್ಲೆ ಮಾಡೋದು, ಭಯ ಸೃಷ್ಠಿಸುವ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಪೊಲೀಸರಿಗೆ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳನ್ನು ಸಹಿಸಲು ಸಾಧ್ಯ ಇಲ್ಲ, ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಗೆ ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ತರಲು ಕೋಮುವಾದಿ ಶಕ್ತಿಗಳು ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಮಂಗಳೂರಿಗೆ ವಿದ್ಯಾರ್ಜನೆಗೆ ಬರಲು ಭಯ ಆಗುತ್ತಿದೆ. ಆಡ್ಮಿಷನ್ ಆಗಿದೆ ಕಾಲೇಜಿಗೆ ಹೋಗಲು ಭಯ ಆಗುತ್ತಿದೆ ಅಂತಾ ವಿದ್ಯಾರ್ಥಿಗಳು ನನಗೆ ಹೇಳಿದರು. ಭಯ ಪಡಬೇಡಿ ಅಂತಾ ವಿದ್ಯಾರ್ಥಿಗಳನ್ನು ಕಳುಹಿಸಿದ್ದೇನೆ ಎಂದರು.
ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಈ ಕೆಲಸ ನಡೆಯುತ್ತಿದೆ. ಈ ಕೆಲಸಕ್ಕೆ ಮತೀಯವಾದಿ ಶಕ್ತಿಗಳು ಸೇರಿಕೊಳ್ಳುತ್ತಿದೆ. ಈ ಕೆಲಸ ಮಾಡುವವರನ್ನು ಗಡಿಪಾರು ಮಾಡುತ್ತೇವೆ. ಇಂತಹ ಕ್ರಿಮಿನಲ್ ಗಳಿಗೆ ಬಿಜೆಪಿ ಸಪೋರ್ಟ್ ಮಾಡುತ್ತಿದೆ. ಬಿಜೆಪಿಗೆ ಜಿಲ್ಲೆಯಲ್ಲಿ ಸಾಮರಸ್ಯ ಇರೋದು ಬೇಡ್ವಾ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಜಿಲ್ಲೆಯ ಶಾಂತಿಗೆ ಸಹಕಾರವನ್ನು ನೀಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
-*********