ಕೆ.ಆರ್.ನಗರ : ಪಟ್ಟಣ ಪುರಸಭೆಯ 2026-27ನೇ ಸಾಲಿನ ಆಯವ್ಯಯ ಮಂಡಣೆಯನ್ನು ಆಡಳಿತಾಧಿಕಾರಿಗಳು ಆದ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯರಾಣಿ ಮಂಡಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 3 ಲಕ್ಷದ 97 ಸಾವಿರ ರೂ ಆಧಾಯ ನಿರೀಕ್ಷೆ ಮಾಡಲಾಗಿದ್ದು ಇದರೊಂದಿಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.
2026-27 ನೇ ಆಯ ವ್ಯಯದಲ್ಲಿ ಸ್ಥಳಿಯ ಸಂಪನ್ಮೂಲಗಳಾದ ಆಸ್ತಿ ತೆರಿಗೆಯಿಂದ 4 ಕೋಟಿ 20 ಲಕ್ಷ, ನೀರಿನ ತೆರಿಗೆಯಿಂದ 90 ಲಕ್ಷ, ಪುರಸಭೆ ಮಳಿಗೆ ಮತ್ತು ಐಡಿಎಸ್ ಎಂಟಿ ಮಳಿಗೆಗಳಿಂದ 18 ಲಕ್ಷದ 25 ಸಾವಿರ, ಉದ್ದಿಮ ಪರವಾನಿಗೆಯಿಂದ 22 ಲಕ್ಷ ಮತ್ತು ಇತರೆ ಮೂಲಗಳಿಂದ 1 ಕೋಟಿ 20 ಲಕ್ಷ ನಿರೀಕ್ಷೆ ಮಾಡಲಾಗಿದೆ ಇದರ ಜತೆಗೆ ಸರ್ಕಾರದ 15ನೇ ಹಣಕಾಸು ಅನುದಾನದಿಂದ 2 ಕೋಟಿ ಎಸ್ ಎಫ್ ಸಿ ಯಿಂದ 28 ಲಕ್ಷ ಎಸ್ ಎಫ್ ಸಿ ವಿದ್ಯುತ್ ಶಕ್ತಿ ಅನುದಾನದಿಂದ 2 ಕೋಟಿ 55 ಲಕ್ಷ ಎಸ್ ಎಫ್ಸಿ ವೇತನ ಅನುದಾನದಿಂದ 2 ಕೋಟಿ 20 ಲಕ್ಷ, ಮತ್ತು ಕುಡಿಯುವ ನೀರಿನ ಅನುದಾನದಿಂದ 7 ಲಕ್ಷ ರೂಗಳನ್ನು ನಿರೀಕ್ಷೆ ಮಾಡಲಾಗಿದೆ ಎಂದರು.
ಪುರಸಭೆಯಿಂದ ಸಾರ್ವಜನಿಕರಿಗೆ ಮೂಲಭೂತ ಸವಲತ್ತು ಕಲ್ಪಿಸಲು ನಿಗಧಿ ಪಡಿಸಿರುವ ಅಂದಾಜು ಖರ್ಚುಗಳ ವಿವರ ಪ್ರಕಟಿಸಿದ ಆಡಳಿತಾಧಿಕಾರಿಗಳು ಕಚೇರಿ ನಿರ್ವಹಣೆಗೆ 30 ಲಕ್ಷ, ರಸ್ತೆ, ಚರಂಡಿ ಕಟ್ಟಡ ದುರಸ್ಥಿ ಮತ್ತು ನಿರ್ವಹಣೆಗೆ 35 ಲಕ್ಷ, ಬೀದಿ ದೀಪ ನಿರ್ವಹಣೆಗೆ 30 ಲಕ್ಷ, ವಾಹನಗಳ ಇಂಧನ ದುರಸ್ಥಿ ಹಾಗೂ ನಿರ್ವಹಣೆಗೆ 28 ಲಕ್ಷ ಹೊರ ಗುತ್ತಿಗೆ ನೌಕರರ ವೇತನಕ್ಕೆ 1 ಕೋಟಿ ಹಾಗೂ ಪತ್ರಕರ್ತರ ಆರೋಗ್ಯ ನಿಧಿಗೆ 2 ಲಕ್ಷ ಹಣ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದರೊಂದಿಗೆ ಕಚೇರಿ ಯಂತ್ರೋಪಕರಣ, ಕಂಪ್ಯೂಟರ್ ಗಳಿಗೆ 5 ಲಕ್ಷ ರಸ್ತೆಗಳ ನಿರ್ಮಾಣಕ್ಕೆ 5 ಲಕ್ಷ, ಚರಂಡಿಗಳು ಮತ್ತು ಮಳೆ ನೀರಿನ ಚರಂಡಿ ನಿರ್ಮಾಣಕ್ಕೆ 40 ಲಕ್ಷ , ಸ್ಮಶಾನ ಅಭಿವೃದ್ಧಿಗೆ 25 ಲಕ್ಷ, ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ 60 ಲಕ್ಷ, ನೀರು ಸರಬರಾಜು ವಿಭಾಗಕ್ಕೆ 40ಲಕ್ಷ, ಯುಜಿಡಿ ಸಂಪರ್ಕ ಕಲ್ಪಿಸಲು 30 ಲಕ್ಷ , ಕಟ್ಟಡ ನಿರ್ಮಾಣಕ್ಕೆ 40 ಲಕ್ಷ, ಘನ ತ್ಯಾಜ್ಯ ನಿರ್ವಹಣೆಗೆ 18ಲಕ್ಷ ವೆಚ್ಚ ಮಾಡಲು ತೀರ್ಮಾನಿಸಿದೆ ಎಂದು ನುಡಿದರು.
ಈ ಎಲ್ಲಾ ವೆಚ್ಚಗಳೊಂದಿಗೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ತೀರ್ಮಾನಿಸಿದ್ದು ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿಸಿ ತಮ್ಮ ಸಹಕಾರ ನೀಡಬೇಕೆಂದು ಕೋರಿದರು.
ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಆರೋಗ್ಯ ನಿರೀಕ್ಷಕರಾದ ರಾಜೇಂದ್ರ, ಲೋಕೇಶ್, ಪರಿಸರ ಇಂಜಿನಿಯರಿಂಗ್ ಮಧುಸೂದನ್ ಇದ್ದರು.



