ಬೆಂಗಳೂರು: ಇತ್ತೀಚೆಗೆ ಮರದ ಕೊಂಬೆ ಬಿದ್ದು 29 ವರ್ಷದ ಅಕ್ಷಯ್ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ, ಬಿಬಿಎಂಪಿಯ ಆರ್ಎಫ್ಒ, ಎಸಿಎಫ್ ಮತ್ತು ಡಿಎಫ್ಒ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆನಕ್ ರಾಜ್ ಎಂಬವರು ಹನುಮಂತನಗರ ಠಾಣೆಗೆ ದೂರು ನೀಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯವೇ ಅಕ್ಷಯ್ ಸಾವಿಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜೂನ್ 15ರಂದು ಬಸವನಗುಡಿಯ ಬ್ರಹ್ಮ ಚೈತನ್ಯ ಮಂದಿರದ ಬಳಿ ಮರದ ಕೊಂಬೆ ಬಿದ್ದು ಅಕ್ಷಯ್ ತೀವ್ರವಾಗಿ ಗಾಯಗೊಂಡಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ 60 ತಾಸು ಕಳೆದರೂ ಮೆದುಳು ಸ್ಪಂದಿಸದೇ ಹೋಗಿದ್ದರಿಂದ ಚಿಕಿತ್ಸೆ ವಿಫಲವಾಯಿತು. ಹೃದಯ ಸ್ತಂಭನದಿಂದ ನಿನ್ನೆ ಅವರು ಮೃತಪಟ್ಟಿದ್ದಾರೆ.
ಬಿಬಿಎಂಪಿ ಅರಣ್ಯಾಧಿಕಾರಿಗಳ ವಿಚಾರಣೆ ಮಾಡಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಸಂಬಂಧಿತ ಅಧಿಕಾರಿಗಳ ವಿಚಾರಣೆ ನಡೆಯಲಿದೆ.