ನಯನತಾರಾ ನಟಿಸಿರುವ ‘ಅನ್ನಪೂರ್ಣಿ’ ಹೆಸರಿನ ಸಿನಿಮಾ ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಪ್ರಭು ಶ್ರೀರಾಮನಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ನಯನತಾರಾ ಹಾಗೂ ಸಿನಿಮಾಕ್ಕೆ ಸಂಬಂಧಿಸಿದ ಏಳು ಜನರ ವಿರುದ್ಧ ಮಧ್ಯಪ್ರದೇಶದ ಜಬಲ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಲ ದಿನದ ಹಿಂದೆ ಮುಂಬೈನಲ್ಲಿಯೂ ಸಹ ಸಿನಿಮಾದ ವಿರುದ್ಧ ಪ್ರಕರಣ ದಾಖಲಾಗಿದೆ.
ಸಿನಿಮಾ ಅಷ್ಟೇನು ಒಳ್ಳೆಯ ಪ್ರದರ್ಶನ ಕಾಣಲಿಲ್ಲ ಬಳಿಕ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಆದರೆ ಸಿನಿಮಾಕ್ಕೆ ವಿರೋಧವೂ ವ್ಯಕ್ತವಾಯಿತು. ಸಿನಿಮಾದಲ್ಲಿ ಶ್ರೀರಾಮನ ಅಪಮಾನ ಮಾಡಲಾಗಿದೆ. ಹಿಂದೂ ಸಮುದಾಯದ ಭಾವನೆಗಳಿಗೆ, ಶ್ರೀರಾಮನ ಭಕ್ತರ ಭಾವನೆಗಳಿಗೆ ಧಕ್ಕೆ ಬರುವ ಅಂಶಗಳಿವೆ ಎಂಬ ಆರೋಪ ಎದುರಾಗಿದೆ.
‘ವನವಾಸದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣ ಹಸಿವಾದಾಗ ಪ್ರಾಣಿಗಳ ಬೇಟೆ ಆಡಿ ಸೇವಿಸಿದ್ದರು. ರಾಮಾಯಣದಲ್ಲಿ ಈ ಬಗ್ಗೆ ಉಲ್ಲೇಖವಿದೆ’ ಎಂಬ ಸಂಭಾಷಣೆ ಸಿನಿಮಾದಲ್ಲಿದೆ. ಈ ಸಂಭಾಷಣೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ ಸಿನಿಮಾದಲ್ಲಿರುವ ಇತರೆ ಕೆಲವು ದೃಶ್ಯಗಳ ಬಗ್ಗೆಯೂ ಆಕ್ಷೇಪ ಎತ್ತಲಾಗಿದೆ. ಬ್ರಾಹ್ಮಣ ಯುವತಿ ಮಾಂಸಾಹಾರದ ಖಾದ್ಯಗಳನ್ನು ಮಾಡುವುದು, ನಮಾಜು ಮಾಡುವ ದೃಶ್ಯಗಳೂ ಇವೆ. ಇದರ ಬಗ್ಗೆಯೂ ಆಕ್ಷೇಪ ಎತ್ತಲಾಗಿದ್ದು, ಈ ಸಿನಿಮಾ ‘ಲವ್ ಜಿಹಾದ್’ಗೆ ಪ್ರೇರೇಪಣೆ ನೀಡುತ್ತಿದೆ ಎಂಬ ಆರೋಪವನ್ನೂ ಕೆಲವರು ಮಾಡಿದ್ದಾರೆ.