Friday, April 11, 2025
Google search engine

Homeರಾಜ್ಯಮುಡಾ ಸೈಟ್‌ ಪಡೆಯುವಲ್ಲಿ ಅಕ್ರಮ ಆರೋಪ: ಜೆಡಿಎಸ್‌ ಶಾಸಕ ಜಿ ಟಿ ಡಿ ವಿರುದ್ಧ ಸ್ನೇಹಮಯಿ...

ಮುಡಾ ಸೈಟ್‌ ಪಡೆಯುವಲ್ಲಿ ಅಕ್ರಮ ಆರೋಪ: ಜೆಡಿಎಸ್‌ ಶಾಸಕ ಜಿ ಟಿ ಡಿ ವಿರುದ್ಧ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

ಮೈಸೂರು: ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತಮ್ಮ ಪ್ರಭಾವ ಬಳಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸೈಟ್‌ ಪಡೆಯುವಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ​

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಮ್ಮ ಪ್ರಭಾವವನ್ನು ಬಳಸಿಕೊಂಡು, ಸರ್ಕಾರಕ್ಕೆ ಸೇರಿದ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಸಿದ್ದಾರೆ. ಬಳಿಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆ.ಚೌಡಯ್ಯ ಎಂಬವರ ಹೆಸರಿಗೆ 50:50 ಅನುಪಾತದಲ್ಲಿ ಒಟ್ಟು ಆರು ನಿವೇಶನಗಳನ್ನು ಅಕ್ರಮವಾಗಿ ಕೊಡಿಸಿದ್ದಾರೆ. ಇದರಲ್ಲಿ, 50X80 ಅಡಿ ಅಳತೆಯ ಎರಡು ನಿವೇಶನಗಳನ್ನು, ಅವರ ಮಗಳು ಡಿ.ಅನ್ನಪೂರ್ಣ ಮತ್ತು ಅಳಿಯ ಜಿ.ಎಂ.ವಿಶ್ವೇಶ್ವರಯ್ಯನವರ ಹೆಸರಿಗೆ ಮಾಡಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

ಮೈಸೂರು ತಾಲ್ಲೂಕು ಕಸಬಾ ಹೋಬಳಿ ದೇವನೂರು ಗ್ರಾಮದ ಸರ್ವೆ ನಂ.154ರ ಆರ್.ಟಿ.ಸಿ ಪ್ರತಿಯಲ್ಲಿನ 9ನೇ ಕಾಲಂನಲ್ಲಿ ಜವರಯ್ಯ, ಕೆ.ಬೋರಯ್ಯ, ಚೌಡಯ್ಯ, ಪುಟ್ಟಣ್ಣಯ್ಯ, ಗಂಗಾಧರ ಎಂಬುವವರ ಹೆಸರಿಗೆ 3.38 ಎಕರೆ ಜಮೀನಿನ ಜಂಟಿ ಖಾತೆ ಇದೆ. ಇದೇ, ಆರ್​ಟಿಸಿಯಲ್ಲಿ 11ನೇ ಕಾಲಂನಲ್ಲಿ ನಗರದ ಭೂಮಿತಿ ಕಾಯಿದೆ ವ್ಯಾಪ್ತಿಗೆ ಒಳಪಟ್ಟಿರುವುದಾಗಿ ನಮೂದಿಸಿದೆ. ಅಂದರೆ ಸರ್ಕಾರದ ಆಸ್ತಿಯಾಗಿದೆ.

ಈ ಜಮೀನು ನಗರದ ಭೂಮಿತಿ ಕಾಯಿದೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸರ್ಕಾರ ವಶಕ್ಕೆ ಪಡೆದಿದೆಯೇ? ಅಥವಾ ಕಾಯಿದೆಯಿಂದ ಕೈಬಿಡಲಾಗಿದೆಯೆ? ಕೈಬಿಟ್ಟಿದ್ದರೆ ಆರ್​ಟಿಸಿಯಲ್ಲಿ ಈಗಲೂ ಉಲ್ಲೇಖ ಇರಲು ಕಾರಣವೇನು? ಪ್ರಾಧಿಕಾರದಿಂದ ಜಮೀನನ್ನು ಸ್ವಾಧೀನಕ್ಕೆ ಪಡೆಯಲಾಗಿದೆಯೇ? ಯಾವಾಗ ಸ್ವಾಧೀನಕ್ಕೆ ಪಡೆಯಲಾಗಿದೆ? ಆ ಸಂದರ್ಭದಲ್ಲಿ ಯಾರಿಗೆ ಪರಿಹಾರದ ಹಣವನ್ನು ನೀಡಲಾಗಿದೆ? ಅಥವಾ ಪರಿಹಾರ ನೀಡಿಲ್ಲವೇ? ಜಮೀನಿನಲ್ಲಿ ಪ್ರಾಧಿಕಾರದಿಂದ ಬಡಾವಣೆ ರಚನೆ ಮಾಡಲಾಗಿದೆಯೇ? ಯಾವಾಗ ಬಡಾವಣೆ ರಚನೆ ಮಾಡಲಾಗಿದೆ? ಎಂಬ ಅಂಶಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಮೈಸೂರಿನ ವಿಜಯನಗರ 4ನೇ ಹಂತದ 2ನೇ ಘಟ್ಟದ ನಿವೇಶನ ಸಂಖ್ಯೆ-12257 ಮತ್ತು 12259 ಸಂಖ್ಯೆಯ 50X80 ಅಳತೆಯ ನಿವೇಶನಗಳನ್ನು ಜಿಟಿ ದೇವೇಗೌಡ ಪುತ್ರಿ ಡಿ.ಅನ್ನಪೂರ್ಣ ಮತ್ತು ಅಳಿಯ ಜಿ.ಎಂ.ವಿಶ್ವೇಶ್ವರಯ್ಯಗೆ 2023ರ ನವೆಂಬರ್​ 11 ರಂದು ಕ್ರಯಪತ್ರಗಳನ್ನು ನೊಂದಣಿ ಮಾಡಲಾಗಿದೆ. ಇದೇ ನಿವೇಶನಗಳನ್ನು ಪ್ರಾಧಿಕಾರದಿಂದ ಚೌಡಯ್ಯ ಎಂಬುವರಿಗೆ 2023ರ ಅಕ್ಟೋಬರ್​ 19 ರಂದು ಕ್ರಯಪತ್ರ ನೊಂದಣಿ ಮಾಡಲಾಗಿದೆ. ಅದಾದ ಕೇವಲ ಸುಮಾರು 19 ದಿನಗಳ ಅಂತರದಲ್ಲೇ ಡಿ.ಅನ್ನಪೂರ್ಣ ಮತ್ತು ಜಿ.ಎಂ.ವಿಶ್ವೇಶ್ವರಯ್ಯಗೆ ಕ್ರಯಪತ್ರಗಳನ್ನು ನೊಂದಣಿ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES
- Advertisment -
Google search engine

Most Popular