ಮಂಡ್ಯ: ನನಗೆ ಜಿಲ್ಲೆ ಅಭಿವೃದ್ಧಿ ಕಮಿಟ್ಮೆಂಟ್ ಇದೆ. ಎಲ್ಲಿಗೆ ಹೋದರು ಜಿಲ್ಲೆಯ ನೆನಪಿಗೆ ಬರುತ್ತೆ. ಇಡೀ ರಾಜ್ಯದ ಜವಾಬ್ದಾರಿ ಜೊತೆಗೆ ಮಂಡ್ಯ ಜವಾಬ್ದಾರಿ ನನ್ನ ಮೇಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಕೃಷಿ ಸಚಿವರು ವಾರಕ್ಕೊಂದು ಬಾರಿ ನಾಗಮಂಗಲಕ್ಕೆ ಬಂದು ಕಲೆಕ್ಷನ್ ಮಾಡ್ತಾರೆ ಎಂಬ ಮಾಜಿ ಶಾಸಕ ಸುರೇಶಗೌಡ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ಯಾರ್ರೀ ಸುರೇಶಗೌಡ್ರು.?.. ಯಾರು ಅವರು. ಯಾರದ್ದೊ ಹೆಸರಿನಲ್ಲಿ, ಯಾವುದೋ ಗಳಿಗೆಯಲ್ಲಿ ಶಾಸಕರಾದವ್ರು ಲೀಡರ್ ಆಗೋಕೆ ಆಗಲ್ಲ. ಸ್ವತಃ ಶಕ್ತಿ ಬೆಳೆಸಿಕೊಂಡವರು ನಾಯಕರಾಗ್ತಾರೆ. ಅವರು 5 ವರ್ಷ ಏನ್ ಮಾಡಿದ್ರು ಅಂತಾ ಜ್ಞಾಪಕ ಮಾಡ್ಕೋಬೇಕು. 7 ಜನ ಶಾಸಕರಿದ್ರು, ಮಂತ್ರಿ ಇದ್ರು, 12 ತಿಂಗಳು ಸರ್ಕಾರ ಇತ್ತು. ಏನ್ ಮಾಡಿದ್ರು ಅಂತಾ ಜ್ಞಾಪಕ ಮಾಡ್ಕೊಳ್ಳಿ ಎಂದು ಕಿಡಿಕಾರಿದರು.
ನಮಗೆ ದುಡ್ಡಿಲ್ವಲ್ಲ ಎಲ್ಲ ಇವರೇ ಕೊಡಿಸುತ್ತಿದ್ದಾರೆ ಎಂದು ನಗುತ್ತಲೆ ಸುರೇಶಗೌಡ ವಿರುದ್ಧ ವ್ಯಂಗ್ಯವಾಡಿದರು.
ಕಂಡಕ್ಟರ್ ಜಗದೀಶ್ ಗೆ ದುಡ್ಡು ಕೊಟ್ಟು ಹೇಳಿಕೆ ಕೊಡಿಸಿದ ಆರೋಪಕ್ಕೆ ಪ್ರತಿಕ್ರಿಯಿಸಿ, ಕಂಪ್ಲೆಂಟ್ ಕೊಟ್ಟವರು, ಅವರನ್ನು ದುರುಪಯೋಗಪಡಿಸಿಕೊಂಡವರು ಯಾರು ಎಂದು ಜನ ಮಾತನಾಡ್ತಿದ್ದಾರೆ. ಈ ಆರೋಪ ಬರುತ್ತೆ ಅಂತಾನೆ ಆಸ್ಪತ್ರೆಗೆ ಜಗದೀಶ್ ನೋಡಲು ಹೋಗಲಿಲ್ಲ. ಬದುಕಿಸಲು ಪ್ರಯತ್ನಪಡದೆ ಆಂಬುಲೆನ್ಸ್ ತಡೀತಾರೆ. ಕುಮಾರಸ್ವಾಮಿ ಆಸ್ಪತ್ರೆಗೆ ಶಿಫ್ಟ್ ಮಾಡಿಸ್ಬೇಡಿ ಅಂತಾರೆ. ಜೆಡಿಎಸ್ ನವರು ಬದುಕಿಸೋಕೆ ತಯಾರಿದ್ರಾ.? ಮನಸಾಕ್ಷಿಯನ್ನ ಕೇಳಿಕೊಳ್ಳೋಕೆ ಜೆಡಿಎಸ್ ನವರಿಗೆ ಹೇಳಿ ಎಂದು ಟಾಂಗ್ ನೀಡಿದರು.
ಸರ್ಕಾರ ಸದೃಢವಾಗಿದೆ
ಸಿಎಂ ಮಾಡೋದು ಗೊತ್ತು, ಇಳಿಸೋದು ಗೊತ್ತು ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾವ ಕಾರಣಕ್ಕೆ ಹಾಗೆ ಹೇಳಿದ್ದಾರೋ ನಾನು ನೋಡಿಲ್ಲ. ಇದು ಅನಾವಶ್ಯಕವಾಗಿದ್ದು,. ನಮ್ಮ ಪಾರ್ಟಿಯಲ್ಲಿ ಆ ತರಹದ ಆಲೋಚನೆ ಇಲ್ಲ. ಸಿಎಂ ಬಗ್ಗೆ ಯಾವುದೇ ಅಪಸ್ವರ ಇಲ್ಲ. ಸಿಎಂ ಸದೃಢವಾಗಿದ್ದಾರೆ, ಸರ್ಕಾರವು ಸದೃಢವಾಗಿದೆ ಎಂದರು.
ಐದು ಗ್ಯಾರಂಟಿ ಕೊಟ್ಟಿರುವುದೇ ನಮ್ಮ ಪಕ್ಷಕ್ಕೆ, ಸರ್ಕಾರಕ್ಕೆ ಹೆಗ್ಗಳಿಕೆ. ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ಕುರಿತು ಮಾತನಾಡಿ, ಬಿಜೆಪಿಯವರಿಗೆ ಇನ್ನೇನು ಕೆಲಸವಿಲ್ಲ. ಬಿಜೆಪಿ, ಜೆಡಿಎಸ್ ಅನ್ನು ಜನರು ನಂಬಲಿಲ್ಲ. ವಿರೋಧ ಪಕ್ಷದ ನಾಯಕನನ್ನು ಮಾಡಲು ಆಗಲಿಲ್ಲ. ಅವರ ಪರಿಸ್ಥಿತಿ ಏನು ಅಂತಾ ತಿಳಿದುಕೊಳ್ಳಬೇಕು ಎಂದರು.
ಜನತಾದಳ-ಬಿಜೆಪಿ ಹೊಂದಾಣಿಕೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಗೆ ಜೆಡಿಎಸ್ ಅನಿವಾರ್ಯ, ಜೆಡಿಎಸ್ ಗೆ ಬಿಜೆಪಿ ಅನಿವಾರ್ಯ ಎಂದರು.