ಮಂಡ್ಯ: ವಿಸಿ ನಾಲೆಗೆ ಕಾರು ಉರುಳಿ ಐವರ ಜಲಸಮಾಧಿ ಆದ ದುರಂತ ನಡೆದ ಸ್ಥಳದಲ್ಲೇ ಮತ್ತೊಂದು ಅವಘಡ ನಡೆದಿದೆ.
ಶಾಸಕರ ಸ್ಥಳ ಪರಿಶೀಲನೆ ವೇಳೆ ಎತ್ತುಗಳು ಬೆದರಿದ್ದು, ಭಾರೀ ಅವಘಡ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ವಿಸಿ ನಾಲೆ ಬಳಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು.
ಇದೇ ವೇಳೆ ಎತ್ತಿನ ಗಾಡಿಯೊಂದು ಬಂದಿದೆ. ಎತ್ತುಗಳು ನಾಲೆ ಸೇತುವೆ ಬಳಿ ಬರುತ್ತಿದ್ದಂತೆ ಜನರನ್ನು ಕಂಡು ಬೆದರಿವೆ. ಆಗ ಎತ್ತಿನ ಗಾಡಿ ಓಡಿಸುತ್ತಿದ್ದ ರೈತ ಎತ್ತುಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದು ಕೊನೆಗೆ ಗಾಡಿಯಿಂದ ಎತ್ತುಗಳನ್ನು ಬೇರ್ಪಡಿಸಲಾಯಿತು. ಹಸುಗಳು ಅಷ್ಟೇ ವೇಗವಾಗಿ ಓಡಿದವು. ದರ್ಶನ್ ಪುಟ್ಟಣಯ್ಯ ಸಮೀಪವೇ ಬೆದರಿ ಓಡಿದವು. ಆಗ ಓಡಿ ಹೋಗ್ತಿದ್ದ ಹಸುಗಳನ್ನ ಹಿಡಿಯಲು ಹೋಗಿ ಅಧಿಕಾರಿಯೊಬ್ಬರು ರಸ್ತೆ ಮೇಲೆ ಬಿದ್ದರು. ಘಟನೆಯಿಂದಾಗಿ ಒಂದು ಕ್ಷಣ ಎಲ್ಲರೂ ವಿಚಲಿತರಾದರು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟದ ಬಳಿ ಮಂಗಳವಾರ ಸಂಜೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದಿದೆ. ಈ ಪರಿಣಾಮ ಮಗು ಸೇರಿ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿದ್ದಾರೆ.
ಕಳೆದ ಐದು ವರ್ಷದಲ್ಲಿ ವಿಸಿ ನಾಲೆಯ ದುರಂತಗಳಲ್ಲಿ 40 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.