ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಹೆಚ್ಡಿ ರೇವಣ್ಣ ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಂಧನ ಬಳಿಕ ಇಂದು ನ್ಯಾಯಾಧೀಶರ ಮುಂದೆ ರೇವಣ್ಣ ಅವರನ್ನು ಹಾಜರುಪಡಿಸಲಾಗಿತ್ತು. ರೇವಣ್ಣ ಪರ ವಕೀಲ ವಾದಕ್ಕೆ ಯಾವುದೇ ಮನ್ನಣೆ ಸಿಗಲಿಲ್ಲ. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಧೀಶರು ರೇವಣ್ಣ ಅವರನ್ನು ೪ ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಈ ಮೂಲಕ ಹೆಚ್ಡಿ ರೇವಣ್ಣಗೆ ಮತ್ತೆ ಹಿನ್ನಡೆಯಾಗಿದೆ. ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಎಸ್ಐಟಿ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.
ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಮೇ.೦೪ರಂದು ಹೆಚ್ಡಿ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದರು. ಇಂದು ಬೌರಿಂಗ್ ಆಸ್ಪತ್ರೆಯಲ್ಲಿ ರೇವಣ್ಣಗೆ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಬಳಿಕ ಕೋರಮಂಗಲದಲ್ಲಿರುವ ೧೭ ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮನೆಗೆ ರೇವಣ್ಣ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ನ್ಯಾ.ರವೀಂದ್ರಕುಮಾರ್ ಬಿ.ಕಟ್ಟಿಮನಿ ಮುಂದೆ ಹಾಜರುಪಡಿಸಿ ವಿಚಾರಣೆಗೆ ನೀಡುವಂತೆ ಮನವಿ ಮಾಡಿದ್ದರು. ಪ್ರಾಥಮಿಕ ತನಿಖೆ ಹಾಗೂ ಸಾಕ್ಷ್ಯಾಧಾರಗಳ ಆಧರಿಸಿ ರೇವಣ್ಣಗೆ ಜಾಮೀನು ನಿರಾಕರಿಸಿ, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇತ್ತ ರೇವಣ್ಣ ಪರ ವಕೀಲರು ಎಸ್ಐಟಿ ಅಧಿಕಾರಿಗಳ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಿಡ್ನಾಪ್ ಪ್ರಕರಣಗಳಲ್ಲಿ ಜಾಮೀನು ರಹಿತ ಸೆಕ್ಷನ್ ಹಾಕಲಾಗಿದೆ. ಸಂತ್ರಸ್ತೆ ಹೇಳಿಕೆ ಹೊರತುಪಡಿಸಿ ಸಾಕ್ಷ್ಯಗಳಿಲ್ಲ ಎಂದು ರೇವಣ್ಣ ಪರ ವಕೀಲರು ವಾದ ಮಂಡಿಸಿದ್ದಾರೆ. ಹೀಗಾಗಿ ಪೊಲೀಸ್ ಕಸ್ಟಡಿಗೆ ನೀಡದಂತೆ ರೇವಣ್ಣ ಪರ ವಾದ ಮಂಡಿಸಿದ್ದರು. ಈಗಾಗಲೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೀಗಾಗಿ ಜಾಮೀನು ನೀಡುವಂತೆ ಮನವಿ ಮಾಡಿದ್ದರು.
ಪೊಲೀಸರು ದುರುದ್ದೇಶ ಪೂರ್ವಕವಾಗಿ ಕೇಸ್ ದಾಖಲಿಸಿದ್ದಾರೆ. ರೇವಣ್ಣ ವಿರುದ್ಧ ಯಾವುದೇ ಸಾಕ್ಷಿಗಳು ಲಭ್ಯವಿಲ್ಲ. ಘಟನೆ ನಡೆದಿರೋದು ಯಾವಾಗ ಪ್ರಕರಣ ದಾಖಲಲಾಗಿದ್ದು ಯಾವಾಗ ಎಂದು ರೇವಣ ಪರ ವಕೀಲು ವಾದ ಮಂಡಿಸಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಧೀಶರು ೪ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದ್ದಾರೆ.