ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ. ರಮೇಶ್ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೇಮಕ ಮಾಡಿದ್ದಾರೆ. ಈ ಕುರಿತಾದ ಆದೇಶವನ್ನು ರಾಜ್ಯಪಾಲರ ಅಧೀನ ಕಾರ್ಯದರ್ಶಿ ಬಿ.ಎಸ್. ಪ್ರಶಾಂತ್ ಕುಮಾರ್ ಅವರು ಹೊರಡಿಸಿದ್ದಾರೆ.
ಈ ಹಿಂದೆ ಕುಲಪತಿಯಾಗಿದ್ದ ಪ್ರೊ. ಲಿಂಗರಾಜು ಗಾಂಧಿ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಡಾ. ಕೆ.ಆರ್. ಜಲಜಾ ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಪ್ರೊ. ಶಿವಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸರ್ಚ್ ಕಮಿಟಿಯ ಶಿಫಾರಸ್ಸಿನಂತೆ ಈ ನೇಮಕ ನಡೆದಿದೆ.
ತುಮಕೂರು ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ರಮೇಶ್ ಅವರು, ವಿವಿಧ ಮಹತ್ವದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಕುಲಸಚಿವ (ಆಡಳಿತ), ಕುಲಸಚಿವ (ಮೌಲ್ಯಮಾಪನ), ಹಣಕಾಸು ಅಧಿಕಾರಿ, ನಿರ್ದೇಶಕ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ಚೇರ್ಮನ್ ಹುದ್ದೆಗಳನ್ನು ಭರಿಸಿದ್ದರು. ಇದೀಗ ಅವರು ಕುಲಪತಿಯಾಗಿ ನೇಮಕಗೊಂಡಿದ್ದಾರೆ.