ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಬೀಗರ ಊಟಕ್ಕೆ ಹೋದ ಸಂದರ್ಭದಲ್ಲಿ ಕೆಎಸ್ಆರ್ಪಿ ಉಪನಿರೀಕ್ಷಕ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಕಿತ್ತೂರು ಗ್ರಾಮದ ನಿವಾಸಿಯೂ ಆದ ತಾ.ಪಂ. ಮಾಜಿ ಸದಸ್ಯ ಕೆ.ಟಿ.ಪ್ರಕಾಶ್ ದೂರಿದರು.
ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕ್ಷÄಲ್ಲಕ ವಿಚಾರಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ ಪರಿಣಾಮ ತಲೆಗೆ ಗಂಭೀರವಾದ ಪೆಟ್ಟಾಗಿದ್ದು ನಾಲ್ಕು ಹೊಲಿಗೆ ಹಾಕಲಾಗಿದೆ ಎಂದರಲ್ಲದೆ ನನ್ನ ವಿರುದ್ದ ದಬ್ಬಾಳಿಕೆ ನಡೆಸಿರುವ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಲ್ಲೆ ನಡೆಸಿರುವುದರ ಜತೆಗೆ ಸಾರ್ವಜನಿಕವಾಗಿ ಉದ್ದಟತನದಿಂದ ವರ್ತಿಸಿ ನಾನು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಮಾಡುತ್ತಿದ್ದು ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಒಡ್ಡಿದ್ದು ಇದರಿಂದ ನನಗೆ ಜೀವಭಯ ಉಂಟಾಗಿದೆ ಎಂದು ಅಲವತ್ತುಕೊಂಡರು.
ಈ ಸಂಬoದ ಹಲ್ಲೆ ನಡೆಸಿದ ಕೆಎಸ್ಆರ್ಪಿ ಉಪನಿರೀಕ್ಷಕ ಅನಿಲ್ ಅವರ ವಿರುದ್ದ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಅವರ ವಿರುದ್ದ ಕೇಸು ದಾಖಲಾಗಿದ್ದು ಆತನನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಕೆ.ಟಿ.ಪ್ರಕಾಶ್ ಆಗ್ರಹಿಸಿದರು.
ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಈ ರೀತಿ ನಾಗರೀಕರ ಮೇಲೆ ಹಲ್ಲೆ ನಡೆಸುವಂತಹ ಕೃತ್ಯ ನಡೆಸಿರುವುದು ಸಮಾಜ ವಿರೋಧಿ ಚಟುವಟಿಕೆಯಾಗಿದ್ದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಗೃಹ ಸಚಿವರು ಈ ಬಗ್ಗೆ ಗಮನಹರಿಸಿ ನನ್ನನಂತೆ ನೊಂದವರಿಗೆ ರಕ್ಷಣೆ ನೀಡಬೇಕೆಂದು ಅವರು ಮನವಿ ಮಾಡಿದರು.
ಪೊಲೀಸ್ ನಿರೀಕ್ಷಕರ ಹೇಳಿಕೆ : ಕಳೆದ ನಾಲ್ಕು ದಿನಗಳ ಹಿಂದೆ ಕಿತ್ತೂರು ಗ್ರಾಮದ ಹೊಸಹಟ್ಟಿ ಸಮುದಾಯ ಭವನದಲ್ಲಿ ಮೈಸೂರು ನಗರದ ಕೆಎಸ್ಆರ್ಪಿ ಉಪನಿರೀಕ್ಷಕ ಅನಿಲ್ ಅವರು ಕಿತ್ತೂರು ಗ್ರಾಮದ ತಾ.ಪಂ. ಮಾಜಿ ಸದಸ್ಯ ಕೆ.ಟಿ.ಪ್ರಕಾಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ಆರೋಪ ಹೊತ್ತಿರುವ ಅನಿಲ್ ಅವರಿಗೆ ಠಾಣೆಯ ಜಾಮೀನು ನೀಡಲಾಗಿದೆ ಎಂದು ಬೆಟ್ಟದಪುರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ದೀಪಕ್ ತಿಳಿಸಿದ್ದಾರೆ.