ಬೆಂಗಳೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಿವಾಸದ ಬಳಿ ಉಂಟಾದ ಗೊಂದಲದಿಂದ ರಾಜ್ಯ ರಾಜಧಾನಿಯಲ್ಲಿ ಕುತೂಹಲದ ವಾತಾವರಣ ಮೂಡಿದೆ. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿರುವುದು ತೀವ್ರ ಗಮನಸೆಳೆಯುತ್ತಿದೆ.
ಮಾಹಿತಿಯಂತೆ, ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರು, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ವಿರುದ್ಧ “ಕನ್ನಡ ಸಂಘಟನೆ ಹೆಸರಲ್ಲಿ ಬ್ಲ್ಯಾಕ್ಮೇಲ್” ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಇದರ ಹಿನ್ನೆಲೆಯಲ್ಲಿ, ರೂಪೇಶ್ ರಾಜಣ್ಣ ಅವರು ಸರ್ಫರಾಜ್ ಖಾನ್ ಮಾಡಿದ ಆರೋಪದ ಕುರಿತು ದಾಖಲೆ ಕೇಳಲು ಸಚಿವ ಜಮೀರ್ ಅವರ ನಿವಾಸಕ್ಕೆ ಭೇಟಿ ನೀಡಲು ಯತ್ನಿಸಿದರು.
ಈ ವೇಳೆ ಜಮೀರ್ ಅಹ್ಮದ್ ನಿವಾಸದ ಬಳಿ ಭಾರಿ ಹೈಡ್ರಾಮಾ ನಡೆಯಿತು. ರೂಪೇಶ್ ರಾಜಣ್ಣ ಅವರೊಂದಿಗೆ ಇದ್ದ ಬೆಂಬಲಿಗರು ಜಮೀರ್ ಅವರ ನಿವಾಸದ ಮುಂದೆ ಮುತ್ತಿಗೆ ಹಾಕುವ ಯತ್ನ ಮಾಡಿದಾಗ, ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ನಿಯಂತ್ರಣಕ್ಕೆ ತೆಗೆದುಕೊಂಡರು ಮತ್ತು ವಶಕ್ಕೆ ಪಡೆದರು. ಭದ್ರತಾ ದೃಷ್ಟಿಯಿಂದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡರು.