ಬೆಂಗಳೂರು : ಕೃಷಿ ಭೂಮಿ ಸೇರಿದಂತೆ ಯಾವುದೇ ಸ್ವತ್ತಿಗೆ ಸ್ವಯಂ ಚಾಲಿತವಾಗಿ ಮ್ಯುಟೇಷನ್ ಪಡೆಯಬಹುದಾದ ಹೊಸ ವ್ಯವಸ್ಥೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಚಾಲನೆ ನೀಡಿದ್ದು, ಎಲ್ಲ 7 ದಿನಗಳ ಮತ್ತು 15 ದಿನಗಳ ನೋಟಿಸ್ ಅವಧಿ ಹೊಂದಿರುವ ಮ್ಯುಟೇಶನ್ಗಳನ್ನು ನೋಟಿಸ್ ಅವಧಿ ಮುಕ್ತಾಯವಾದ ನಂತರ ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂ ಚಾಲಿತ ತಂತ್ರಾಂಶದ ಮೂಲಕ ಸರ್ವರ್ ಸಹಿ ಇರುವ ಮ್ಯುಟೇಷನ್ ಪಡೆಯಬಹುದಾಗಿದೆ ಎಂದಿದ್ದಾರೆ.
ಒಂದು ವೇಳೆ 7 ಕೆಲಸದ ದಿನಗಳು ಅಥವಾ 15 ಕೆಲಸದ ದಿನಗಳ ನೋಟಿಸ್ ಅವಧಿಯೊಳಗೆ ಕಂದಾಯ ನಿರೀಕ್ಷಕರು ಅಥವಾ ಸಾರ್ವಜನಿಕರು ತಕರಾರು ಸಲ್ಲಿಸಿದರೆ, ಅಂತಹ ಮ್ಯುಟೇಶನ್ಗಳನ್ನು ಪೂರ್ಣಗೊಳಿಸದೆ, ಆರ್ಸಿಸಿಎಂಎಸ್ ತಂತ್ರಾಂಶದ ಮೂಲಕ ತಹಶೀಲ್ದಾರ್ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ತಹಶೀಲ್ದಾರರ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಇನ್ನೂ ಈ ಹಿಂದೆ ಮ್ಯುಟೇಶನ್ಗಳಿಗೆ ಆಕ್ಷೇಪಣೆ ಇದ್ದಲ್ಲಿ ಅಥವಾ ಅನುಮೋದನೆ ನೀಡಬೇಕಾದಲ್ಲಿ, ರಾಜಸ್ವ ನಿರೀಕ್ಷಕರು ಖುದ್ದಾಗಿ ತಾಲೂಕು ಕಚೇರಿಗಳಿಗೆ ಬಂದು ಸಲ್ಲಿಸಬೇಕಾಗಿತ್ತು. ಈಗ ರಾಜಸ್ವ ನಿರೀಕ್ಷಕರಿಗೆ ಲಾಗಿನ್ ನೀಡಿದ್ದು, ಯಾವುದೇ ಸ್ಥಳದಿಂದ ಆಕ್ಷೇಪಣೆ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಹೊಸ ವ್ಯವಸ್ಥೆಯಿಂದ ಜನಪರ ಮತ್ತು ಸರಳ ಆಡಳಿತವನ್ನು ಸಾರ್ವಜನಿಕರ ಮನೆ ಬಾಗಿಲಿಗೇ ತಲುಪಿಸಬೇಕು ಎಂಬ ಸರ್ಕಾರದ ಉದ್ದೇಶ ಈಡೇರಿದ್ದು, ಈ ಸೇವೆಯನ್ನು ಒಂದು ತಿಂಗಳಿನಿಂದ ಮಂಡ್ಯದಲ್ಲಿ ಅನುಷ್ಠಾನಗೊಳಿಸಿ, ಸಾಧಕ–ಬಾಧಕ ಪರಿಶೀಲಿಸಿದ್ದೇವೆ. ಇವತ್ತಿನಿಂದಲೇ ಶೇ 98 ರಷ್ಟು ಎಲ್ಲಾ ಖಾತೆ ಬದಲಾವಣೆಗಳೂ ಸ್ವಯಂ ಚಾಲಿತಗೊಳ್ಳಲಿವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
2024ನೇ ಏಪ್ರಿಲ್ 1ರಿಂದ 2026ರ ಫೆಬ್ರುವರಿ 20ರವರೆಗಿನ ಅವಧಿಯಲ್ಲಿ 35,11,987 ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತವಾಗಿ ಮಾಡಿದ್ದೇವೆ. ಖಾತೆ ಬದಲಾವಣೆಗೆ ಮೊದಲೆಲ್ಲಾ ಕಂದಾಯ ನಿರೀಕ್ಷರು ಕಚೇರಿಗೆ ಬಂದು ಬೆರಳಚ್ಚು ಕೊಡುವವರೆಗೆ ಈ ಕೆಲಸಗಳು ಆಗುತ್ತಿರಲಿಲ್ಲ. ಆದರೆ, ಈಗ ಅಧಿಕಾರಿಗಳ ಡಿಜಿಟಲ್ ಸಹಿಯ ಮೂಲಕ ಎಲ್ಲ ಕೆಲಸವೂ ಆನ್ಲೈನ್ನಲ್ಲೇ ಆಗುತ್ತಿದೆ. ಖಾತೆ ಬದಲಾವಣೆ ಮತ್ತು ತಕರಾರು ಸಲ್ಲಿಸಲು ಅಧಿಕಾರಿಗಳು ಕಚೇರಿಗೆ ಬರುವ ಅಗತ್ಯವೂ ಇಲ್ಲ. ಅವರ ಸಮಯವೂ ಉಳಿಯುತ್ತದೆ ಎಂದು ದರು.
ಮುಂದುವರೆದು, ಪಹಣಿ ಜತೆ ಆಧಾರ್ ಜೋಡಣೆಯಾದರೆ ಪಹಣಿಯಲ್ಲಿ ಏನೇ ಬದಲಾವಣೆ ಆದರೂ ಆ ಸಂದೇಶವನ್ನು ಆಸ್ತಿ ಮಾಲಿಕರ ಮೊಬೈಲ್ಗೆ ಕಳಿಸಲಾಗುತ್ತದೆ. ಆಗ ಆಸ್ತಿ ಮಾಲೀಕರ ಗಮನಕ್ಕೆ ಬಾರದೆ ನಡೆಯುವ ಖಾತೆ ಬದಲಾವಣೆ ಅಥವಾ ಮಾರಾಟವನ್ನು ತಡೆಯಬಹುದು. ಆ ಮೂಲಕ ಆಸ್ತಿ ಮಾಲೀಕತ್ವಕ್ಕೆ ಖಾತರಿ ಪಡೆಯಬಹುದು. ಅಲ್ಲದೇ, ನ್ಯಾಯಾಲಯ ಆದೇಶ ನಮೂದಿಸಿದರೆ ಅಥವಾ ಪಹಣಿಯಲ್ಲಿ ಬೇರೆಯವರ ಹೆಸರು ಸೇರಿಸಿದರೂ ಎಸ್ಎಂಎಸ್ ಮೂಲಕ ಮಾಹಿತಿ ಬರುತ್ತದೆ ಎಂದು ಹೇಳಿದರು.



