ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ, ಬಾಬು ಜಗಜೀವನ್ ರಾಮ್ ಜನ್ಮದಿನ ಹಾಗೂ ಕೊಡುಗೆಗಳ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪುಷ್ಪಾರ್ಪಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ, ರಾಮಸಮುದ್ರದ ಶಿವಮೂರ್ತಿ ಬಾಬು ಜಗಜೀವನ್ ರಾಮ್ ರಾಷ್ಟ್ರದ ಪರಮ ಭಕ್ತರು. ಭಾರತಕ್ಕೆ ಕೃಷಿ ಕ್ಷೇತ್ರದ ದೂರದೃಷ್ಟಿಯ ಫಲವಾಗಿ ಆಹಾರ ಸಮಸ್ಯೆಯನ್ನು ಬಗೆಹರಿಸಿದ ಮಹಾಪುರುಷ. ಕೃಷಿ ಕೈಗಾರಿಕೆ, ರಕ್ಷಣಾ ,ಸಚಿವರಾಗಿ ಭಾರತದ ಉಪ ಪ್ರಧಾನಿಗಳಾಗಿ ಪ್ರಾಮಾಣಿಕತೆಯಿಂದ ರಾಷ್ಟ್ರಸೇವೆ ಸಲ್ಲಿಸಿದ ಶ್ರೇಷ್ಠ ರಾಷ್ಟ್ರ ಭಕ್ತ ಬಾಬು ಜಗಜೀವನ್ ರಾಮ್ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಅರಕಲವಾಡಿ ನಾಗೇಂದ್ರರವರು ಮಾತನಾಡಿ ಬಾಬು ಜಗಜೀವನ್ ರಾಮ್ ರವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ, ಅವರ ದೂರ ದೃಷ್ಟಿ, ಸಂವೇದನೆ ,ಚಿಂತನೆ ಹಾಗೂ ಅವರು ನೀಡಿದ ರಾಷ್ಟ್ರಕ್ಕೆ ಕೊಡುಗೆಗಳ ಕುರಿತು ಯೋಚಿಸಿದಾಗ ಅವರು ಬಹಳ ಎತ್ತರದ ವ್ಯಕ್ತಿಯಾಗಿರುತ್ತಾರೆ. ಅಸಮಾನತೆಯ ನೋವಿನಲ್ಲೂ ರಾಷ್ಟ್ರಭಕ್ತಿಯನ್ನು ಕಂಡ ಮಹಾಪುರುಷ. ಭಾರತ ಮತ್ತು ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ದೃಢ ನಿರ್ಧಾರ ಕೈಗೊಂಡು ಭಾರತದ ನೆಲವನ್ನು ಸಂರಕ್ಷಿಸುವ ಜೊತೆಗೆ ಪಾಕಿಸ್ತಾನವನ್ನು ಅಡಗಿಸಿದ ಮಹಾನ್ ದೇಶಭಕ್ತ. ಬಾಬು ಜಗಜೀವನ್ ರಾಮ್ ರವರ ಕೊಡುಗೆಗಳ ಬಗ್ಗೆ ಪ್ರಪ್ರಥಮ ಬಾರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಬಹಳ ಹೆಮ್ಮೆಯಾಗಿದೆ. ಸಮಾಜದ ಪರವಾಗಿ ಅಧ್ಯಕ್ಷರಾದ ಋಗ್ವೇದಿ ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಸಮಾಜಸೇವಕ ಹಾಗು ಮಾದಿಗ ಹೋರಾಟ ಸಮಿತಿಯ ಮುಖಂಡರಾದ ರಾಜಶೇಖರ್ ಮಾತನಾಡಿ ಬಾಬು ಜಗಜೀವನ್ ರಾಮ್ ಭಾರತದ ಸನಾತನ ಧರ್ಮ ಮತ್ತು ರಾಷ್ಟ್ರವನ್ನು ಸಂರಕ್ಷಿಸಿದವರು. ಕಾರ್ಮಿಕರ ಹಿತಾಸಕ್ತಿಗಾಗಿ ಅನೇಕ ಉತ್ತಮ ಕಾನೂನುಗಳನ್ನು ರಚಿಸಿ ಕಾರ್ಮಿಕರ ಹಿತವನ್ನು ಬಯಸಿದ ವ್ಯಕ್ತಿ ಎಂದರು.
ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಾಬು ಜಗಜೀವನ್ ರಾಮ್ ರವರ ಕೊಡುಗೆಗಳ ಕುರಿತು ಕಾರ್ಯಕ್ರಮ ರೂಪಿಸಿ ಅವರ ಅನೇಕ ಆಡಳಿತದ ಸುಧಾರಣೆಗಳನ್ನು ಹಾಗೂ ಆಡಳಿತದ ದೂರದೃಷ್ಟಿಯ ಚಿಂತನೆ ಭಾರತದ ಆಹಾರ ಕ್ರಾಂತಿ, ಭಾರತೀಯ ಸಂರಕ್ಷಣೆ ಹಾಗೂ ರಾಷ್ಟ್ರೀಯ ಭದ್ರತೆ, ಕಾರ್ಮಿಕ ಹಿತಾಸಕ್ತಿಗೆ ಸಮಗ್ರವಾಗಿ ತಮ್ಮ ಸಚಿವ ಅವಧಿಯಲ್ಲಿ ಕಾರ್ಯ ನಿರ್ವಹಿಸಿದವರು .ಸ್ವಾತಂತ್ರ್ಯ ಹೋರಾಟಗಾರರಾಗಿ ಮದನಮೋಹನ ಮಾಳವೀಯ, ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿ ಜನಮಾನಸದಲ್ಲಿ ಉಳಿದವರು . ಚಾಮರಾಜನಗರಕ್ಕೆ ಬಾಬು ಜಗಜೀವನ್ ರಾಮ್ ರವರು ಆಗಮಿಸಿದ್ದು ಅವರ ಅದರ ನೆನಪಿಗಾಗಿ ಚಾಮರಾಜನಗರದಲ್ಲಿ ಬಾಬು ಜಗಜೀವನ್ ರಾಮ್ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಬು ಜಗಜೀವನ್ ರಾಮ್ ಸಂಘಟನೆ ಮುಖಂಡರಾದ ಲಿಂಗರಾಜು ರಂಗಸ್ವಾಮಿ, ,ಶಂಕರ, ಚನ್ನಬಸಪ್ಪ, ಬಂಗಾರು, ಮಹಾದೇವಯ್ಯ,ಕನ್ನಡ ಸಾಹಿತ್ಯ ಪರಿಷತ್ತಿನ ಡಿ ಲೋಕೇಶ್, ಲಕ್ಷ್ಮಿ ನರಸಿಂಹ, ಶಿವಲಿಂಗ ಮೂರ್ತಿ ,ಸರಸ್ವತಿ, ರವಿಚಂದ್ರ ಪ್ರಸಾದ್, ಬಿಕೆ ಆರಾಧ್ಯ , ಜನಪದ ಮಹೇಶ್, ಶ್ರಾವ್ಯ ಋಗ್ವೇದಿ ಇದ್ದರು.