ಮೈಸೂರು: ಮೈಸೂರಿನಲ್ಲಿ ಆಷಾಢ ಮಾಸದ ಹಿನ್ನೆಲೆ ಸಡಗರ ಮತ್ತು ಶ್ರದ್ಧೆಯ ನಡುವೆಯೇ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ಪೂಜಾ ಕಾರ್ಯಕ್ರಮಗಳಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಅವರು ಬೆಟ್ಟಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ವೀಕ್ಷಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಉಚಿತ ದರ್ಶನ, ₹300 ಮತ್ತು ₹2000 ಟಿಕೆಟ್ ಹೊಂದಿರುವ ಭಕ್ತರಿಗೆ ಪ್ರತ್ಯೇಕವಾಗಿ ಮೂರು ಮಾರ್ಗದಲ್ಲಿ ದರ್ಶನ ವ್ಯವಸ್ಥೆ ಮಾಡಲಾಗಿದೆ. ಲಲಿತಾ ಮಹಲ್ ಮೈದಾನದಿಂದ ಬಸ್ ವ್ಯವಸ್ಥೆ ಮಾಡುವಾಗ ಪ್ರತಿ ದರ್ಶನದ ವರ್ಗಕ್ಕೆ ವಿಭಜನೆಗೊಂಡ ಬಸ್ ವ್ಯವಸ್ಥೆ ಒದಗಿಸಲಾಗುತ್ತದೆ.
ಉಚಿತ ದರ್ಶನಕ್ಕೆ ಬರುವವರಿಗೆ ಉಚಿತ ಬಸ್ ವ್ಯವಸ್ಥೆ ಲಭ್ಯವಿದೆ. ಆದರೆ ಸಿಟಿ ಬಸ್ ನಿಂದ ಬರುವ ಪುರುಷರಿಗೆ ಟಿಕೆಟ್ ಕಡ್ಡಾಯ. ಲಲಿತಾ ಮಹಲ್ ಬಳಿಯಿಂದ ಹೊರಡುವ ಬಸ್ ಮಾತ್ರ ಶುಕ್ರವಾರ ಉಚಿತವಾಗಿರುತ್ತದೆ. ₹300 ಹಾಗೂ ₹2000 ಟಿಕೆಟ್ ಪಡೆದ ಭಕ್ತರಿಗೆ ಶುಕ್ರವಾರದಿಂದ ಭಾನುವಾರವರೆಗೆ ಮೂರು ದಿನ ಉಚಿತ ಬಸ್ ವ್ಯವಸ್ಥೆ ಲಭ್ಯವಿದೆ.
ಭಕ್ತರಿಗೆ ಡ್ರೈ ಫ್ರೂಟ್ಸ್ ಮತ್ತು ನಂದಿನ ಬಾದಾಮಿ ಹಾಲು ವಿತರಣೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ₹2000 ಟಿಕೆಟ್ ಹೊಂದಿರುವವರಿಗೆ ಮಹಿಷಾಸುರ ಪ್ರತಿಮೆವರೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಈ ಸುದ್ದಿಗೋಷ್ಠಿಯಲ್ಲಿ ಪೋಲಿಸ್ ಕಮಿಷನರ್ ಸೀಮಾ ಲಾಟ್ಕರ್, ಪ್ರಾಧಿಕಾರದ ಕಾರ್ಯದರ್ಶಿ ರೂಪ, ಡಿಸಿಪಿ ಮುತ್ತುರಾಜ್, ಜಿ.ಪಂ ಸಿಇಒ ಯುಕೇಶ್ ಹಾಗೂ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಉಪಸ್ಥಿತರಿದ್ದರು.