ಬಾಗಲಕೋಟ :-ಸಸ್ಯ ಸಂತೆ ತೋಟಗಾರಿಕೆ ಸಮೃದ್ಧಿಗಾಗಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಗೌರವಾನ್ವಿತ ಕುಲಪತಿ ಡಾ. ಎನ್.ಕೆ.ಹೆಗಡೆ ಅವರಿಂದ “ಸಸ್ಯ ಸಂತೆ”ಗೆ ಆಗಮಿಸಿದ ರೈತರಿಗೆ ತೋಟಗಾರಿಕೆ ಸಸಿಗಳನ್ನು ಸಾಂಕೇತಿಕವಾಗಿ ನೀಡುವುದರ ಮೂಲಕ ಸಸ್ಯ ಸಂತೆಗೆ ಚಾಲನೆ ನೀಡಿದರು.
ಅವರು ಸಸ್ಯ ಸಂತೆಗೆ ಆಗಮಿಸಿದ ಗಣ್ಯರನ್ನು ಮತ್ತು ರೈತರನ್ನು ಬರಮಾಡಿಕೊಂಡು, ವಿನೂತನ ಶೈಲಿಯಲ್ಲಿ ಅನಾವರಣಗೊಂಡಿರುವ ಇಂದಿನ ಈ ಸಸ್ಯ ಸಂತೆಯನ್ನು ತೋಟಗಾರಿಕೆ ರೈತರ ಸಮೃದ್ಧಿಗಾಗಿ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಈ ಸಸ್ಯ ಸಂತೆಯು ಮೂರು ದಿನಗಳ ಕಾಲ ನಡೆಯುತ್ತಿದ್ದು , ಬಾಗಲಕೋಟೆ ಜಿಲ್ಲೆ ಮತ್ತು ಸುತ್ತಮುತ್ತಲಿನ ರೈತರು ಒಂದೇ ಸೂರಿನಡಿಯಲ್ಲಿ ಇರುವ ಎಲ್ಲಾ ತೋಟಗಾರಿಕೆ ಬೆಳೆಗಳ ಸಸಿಗಳು ಮತ್ತು ಬೀಜಗಳನ್ನು ಖರೀದಿಸಲು ಸದಾವಕಾಶ ಕಲ್ಪಿಸಲಾಗಿದರ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.
ತೋಟಗಾರಿಕೆ ವಿವಿಯ ಸಂಶೋಧನಾ ನಿರ್ದೇಶಕ ಡಾ. ಹೆಚ್. ಪಿ. ಮಹೇಶ್ವರಪ್ಪ, ವಿಸ್ತರಣಾ ನಿರ್ದೇಶಕ ಡಾ. ಪಿ. ಎಮ್. ಗಂಗಾಧರಪ್ಪ, ಬೀಜ ವಿಭಾಗದ ವಿಶೇಷ ಅಧಿಕಾರಿ ಡಾ. ಲೋಕೇಶ್, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಬಾಲಾಜಿ ಕುಲಕರ್ಣಿ, ಸಹಸಂಶೋಧನಾ ನಿರ್ದೇಶಕ ಡಾ. ಕುಲಪತಿ ಹಿಪ್ಪರಗಿ, ಸಂಪಾದಕರು ಡಾ. ಶಶಿಕುಮಾರ್ ಎಸ್., ಕ್ಷೇತ್ರ ಅಧೀಕ್ಷಕರಾದ ಡಾ. ಆನಂದ ನಂಜಪ್ಪನವರ, ಡಾ. ಸತೀಶ ಪತ್ತೇಪೂರ ಮತ್ತು ಡಾ. ಮಂಜುನಾಥ ಹುಬ್ಬಳ್ಳಿ, ಡಾ. ಕಾಂತೇಶ, ಡಾ. ಸಂಜೀವರೆಡ್ಡಿ, ಪ್ರಗತಿಪರ ರೈತ ಪ್ರಭು ಮುಗಳೊಳ್ಳಿ ಮತ್ತೀತರು ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು.

ಈ ಸಸ್ಯ ಸಂತೆಯಲ್ಲಿ ಅರಣ್ಯ ಸಸಿಗಳು, ಮಾವು, ಲಿಂಬೆ, ಚಿಕ್ಕು, ಪೇರಲ, ಬಳೂಲ ಹಣ್ಣು, ಕವಳೆ, ಬಾಳೆ, ದಾಳಿಂಬೆ ಇತ್ಯಾದಿ ಹಣ್ಣಿನ ಸಸಿಗಳು; ಗುಲಾಬಿ, ಮಲ್ಲಿಗೆ, ಕನಕಾಂಬರ ಮತ್ತು ಅನೇಕ ತರಹದ ಅಲಂಕಾರಿಕ ಸಸ್ಯಗಳು; ಕರಬೇವು, ಮೆಣಸು, ಕಸಿ ಮಾಡಿದ ಕರಿ ಮೆಣಸು, ಪೊದೆ ಮೆಣಸು; ತೆಂಗು, ಅಡಿಕೆ, ಲವಂಗ ಇತ್ಯಾದಿ ನೆಡುತೋಪು ಸಸ್ಯಗಳು; ನುಗ್ಗೆ, ಟೊಮ್ಯಾಟೋ, ಮೆಣಸಿನಕಾಯಿ, ಬದನೆಕಾಯಿ ಇತ್ಯಾದಿ ತರಕಾರಿ ಸಸ್ಯಗಳು, ಪೀಡೆನಾಶಕಗಳು, ಜೈವಿಕ ಗೊಬ್ಬರ, ದಾರಕ್ಷಕ, ಜೈವಿಕ ರಸಗೊಬ್ಬರಗಳು; ಅಲಂಕಾರಿಕ ಸಸ್ಯಗಳು, ಬೀಜಗಳು ಇತ್ಯಾದಿಗಳು; ಅಲ್ಲದೇ ವಿಶ್ವವಿದ್ಯಾಲಯದ ಪ್ರಕಟಣೆಗಳೂ ಕೂಡ ಮಾರಾಟಕ್ಕೆ ಲಭ್ಯವಿದ್ದು ಸಮಸ್ತ ಕೃಷಿಕರು ಹಾಗೂ ನಗರವಾಸಿಗಳು ಸದರಿ ಸಸ್ಯ ಸಂತೆಯ ಲಾಭವನ್ನು ಪಡೆಯಲು ವಿಶ್ವವಿದ್ಯಾಲಯದ ವತಿಯಿಂದ ತಿಳಿಸಲಾಗಿದೆ.
