ಪಿರಿಯಾಪಟ್ಟಣ: ತಾಲೂಕಿನ ಹಿಟ್ನಳ್ಳಿ ಗ್ರಾಮದ ವಿಶೇಷ ಚೇತನ ಪ್ರತಿಭೆ ಶಿವಸಾಗರ್ ಸಮಾಜದ ಮುಖ್ಯ ವಾಹಿನಿಗೆ ಬರಲು ಅಗತ್ಯ ಸಹಾಯ ಮಾಡುವುದಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಂಗಲೆ ಮಲ್ಲಿಕಾರ್ಜುನ್ ಭರವಸೆ ನೀಡಿದರು.
ಪಿರಿಯಾಪಟ್ಟಣಕ್ಕೆ ಭೇಟಿ ನೀಡಿ ಶಿವಸಾಗರ್ ಕುಟುಂಬದವರ ಜತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಲ್ಲರಂತೆ ವಿದ್ಯಾಭ್ಯಾಸ ಮಾಡುತ್ತಿದ್ದ ಶಿವಸಾಗರ್ ಅನಾರೋಗ್ಯಕೀಡಾಗಿ ವಿಶೇಷ ಚೇತನನಾದರೂ ತನ್ನಲ್ಲಿನ ಪ್ರತಿಭೆಯಿಂದಾಗಿ ಹಲವಾರು ಕಥೆ ನಾಟಕ ಕವನ ಚಲನಚಿತ್ರ ಗೀತೆ ಸೇರಿದಂತೆ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅರಿತು ಬರವಣಿಗೆ ಮೂಲಕ ತನ್ನ ಅಭಿಲಾಷೆಯನ್ನು ವ್ಯಕ್ತಪಡಿಸುತ್ತಿರುವುದು ಸಂತಸದ ವಿಷಯವಾಗಿದೆ.

ಈ ನಿಟ್ಟಿನಲ್ಲಿ ಆತನ ಪ್ರತಿಭೆ ಮನಗಂಡು ಕನ್ನಡಪ್ರಭ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಸುತ್ತೂರು ಶ್ರೀಗಳು ಹಾಗೂ ಇತರರ ಸಹಾಯ ದೊರಕುವಂತೆ ಮಾಡಿದ ಪತ್ರಕರ್ತ ಬೆಕ್ಕರೆ ಸತೀಶ್ ಆರಾಧ್ಯ ಕಾರ್ಯ ಇತರರಿಗೆ ಮಾದರಿಯಾಗಿದೆ. ಈತನಲ್ಲಿನ ವಿಶೇಷ ಪ್ರತಿಭೆ ಮನಗಂಡು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಮೊದಲ ವಾರ್ಷಿಕೋತ್ಸವದಲ್ಲಿ ಸನ್ಮಾನಿಸಲಾಗಿತ್ತು. ಮುಂಬರುವ ದಿನಗಳಲ್ಲಿ ಆತನ ಅಭಿಲಾಷೆಯಂತೆ ಇನ್ಫೋಸಿಸ್ ಅಧ್ಯಕ್ಷರಾದ ಸುಧಾ ಮೂರ್ತಿ ಅವರನ್ನು ಭೇಟಿ ಮಾಡಲು ಕೈಲಾದ ಸಹಾಯ ಮಾಡುತ್ತೇನೆ ಹಾಗೂ ಆತನಲ್ಲಿನ ವಿಶೇಷ ಪ್ರತಿಭೆಯನ್ನು ಸಂಘ ಸಂಸ್ಥೆಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಗುರುತಿಸಿ ಪ್ರೋತ್ಸಾಹಿಸಿ ಸಮಾಜದ ಮುಖ್ಯ ವಾಹಿನಿಗೆ ಬರಲು ಅವಕಾಶ ಮಾಡಿಕೊಡುವಂತೆ ಕೋರಿದರು.
ಶಿವಸಾಗರ್ ಮಾತನಾಡಿ ಎಲ್ಲರಂತೆ ನಾನು ಸಹ ಸಮಾಜದಲ್ಲಿ ಬೆರೆತು ನನ್ನಲ್ಲಿನ ಪ್ರತಿಭೆ ಹೊರತರಬೇಕೆಂಬ ಉದ್ದೇಶವಿದೆ ಕೆಲವರು ನನ್ನಲ್ಲಿನ ಪ್ರತಿಭೆ ಗುರುತಿಸಿ ನನ್ನ ಮನೆಗೆ ಭೇಟಿ ನೀಡಿ ಕೈಲಾದ ಸಹಾಯ ಮಾಡಿದ್ದಾರೆ .ಆದರೆ ಈವರೆಗೂ ಯಾರು ನನ್ನಲಿನ ಪ್ರತಿಭೆ ಹೊರ ತರಲು ಸಹಾಯಕ್ಕೆ ಬಾರದಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಬಂಗಲೆ ಮಲ್ಲಿಕಾರ್ಜುನ್ ಅವರನ್ನು ಸಂಪರ್ಕಿಸಿದ ಸಂದರ್ಭ ಅವರು ನನ್ನ ನೆರವಿಗೆ ನಿಂತಿರುವುದು ಸಂತಸ ಎನಿಸುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಿವಸಾಗರ್ ತಾಯಿ ಸರಸ್ವತಿ, ಮುಖಂಡರಾದ ಈರಾಜ್ ಬಹುಜನ್, ದೇವೇಂದ್ರ ಇದ್ದರು.