ಬಳ್ಳಾರಿ : ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ಸಂಬಂಧ ಬಳ್ಳಾರಿಯಲ್ಲಿ ನಡೆದ ಗಲಾಟೆ ರಕ್ತಸಿಕ್ತವಾಗಿ ಮಾರ್ಪಟ್ಟಿದ್ದು, ಇನ್ನಷ್ಟು ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಇದೀಗ ಶಾಸಕ ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿಯೂ ಒಂದು ಬುಲೆಟ್ ಪತ್ತೆಯಾಗಿದ್ದು, ರೆಡ್ಡಿ ಕಡೆಯವರೂ ಭರತ್ ರಡ್ಡಿ ಹಾಗೂ ಬೆಂಬಲಿಗರ ಮೇಲೂ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ದೇಹ ಹೊಕ್ಕ ಗುಂಡು ಪೊಲೀಸ್ ಇಲಾಖೆಯದ್ದಲ್ಲ. ಇದು ಖಾಸಗಿ ವ್ಯಕ್ತಿಯ ರಿವಾಲ್ವರ್ನಿಂದ ಹಾರಿದ ಬುಲೆಟ್ ಎಂದು ಘಟನಾ ಸ್ಥಳದ ಉಸ್ತುವಾರಿ ವಹಿಸಿರುವ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಸ್ಪಷ್ಟನೆ ನೀಡಿದ್ದರು. ಫೈರಿಂಗ್ ಬಳಿಕ ರಾಜಶೇಖರ್ ಸಾವಾಗಿದ್ದು, ಪೊಲೀಸರಿಂದ ನಡೆದ ಫೈರಿಂಗ್ನಲ್ಲಿ ಹಾರಿದ ಗುಂಡು ಇದಲ್ಲ. ಅದು ಯಾರ ಗನ್ನ ಬುಲೆಟ್ ಎಂಬ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಲ್ಲದೆ ರಾಜಶೇಖರ್ ಸಾವಿಗೆ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ಹಾರಿಸಿದ ಗುಂಡೇ ಕಾರಣ ಅಂತ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದು, ರೆಡ್ಡಿ ಟಾರ್ಗೆಟ್ ಮಾಡಿಕೊಂಡೇ ಈ ದಾಳಿ ನಡೆಸಲಾಗಿದೆ ಅಂತ ರಾಮುಲು ದೂರಿದ್ದಾರೆ.
ಈ ಕುರಿತು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಕೂಡ ನನ್ನ ತಮ್ಮನಿಗೆ ಬುಲೆಟ್ ಬಿದ್ದಿದ್ದರೆ ಏನ್ ಮಾಡ್ಬೇಕಿತ್ತು? ನಾವೇ ಫೈರಿಂಗ್ ಮಾಡಿ ನಾವೇ ಬುಲೆಟ್ ತೋರಿಸ್ತೀವಾ? ಬೇಕಂತಲೇ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಆರೋಪಿಸಿದ್ದು, ರಾಜಶೇಖರ್ ಸಾವಿಗೆ ನಾವು ಕಾರಣರಲ್ಲ. ಗುಂಡೇಟೇ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಅಂತ ಆಗ್ರಹಿಸಿದ್ದಾರೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಬ್ರೂಸ್ಫೇಟೆ ಪೊಲೀಸ್ ಠಾಣೆಯಲ್ಲಿ 11 ಜನರ ಮೇಲೆ ಕೇಸ್ ದಾಖಲು ಮಾಡಲಾಗಿದ್ದು, ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು, ಅಲಿಖಾನ್, ದಮ್ಮೂರ ಶೇಖರ್, ಮೋತ್ಕರ್ ಶ್ರೀನಿವಾಸ್, ಪ್ರಕಾಶ್ ರೆಡ್ಡಿ, ರಮಣ, ಪಾಲನ್, ದಿವಾಕರ್, ಮಾರುತಿ ಪ್ರಸಾದ್ ವಿರುದ್ದ ಎಫ್ಐಆರ್ ದಾಖಲು ಮಾಡಲಾಗಿದೆ ಎನ್ನಲಾಗಿದೆ.
ಜನಾರ್ದನ ರೆಡ್ಡಿ ಆಪ್ತರು ಸಹ ಭರತ್ ರೆಡ್ಡಿ ಸೇರಿದಂತೆ ಹಲವರ ವಿರುದ್ಧ ಪ್ರತಿ ದೂರು ದಾಖಲಿಸಿದ್ದು, ಜನಾರ್ದನ ರೆಡ್ಡಿ 2 ಪ್ರತ್ಯೇಕ ದೂರು ದಾಖಲಿಸಿದ್ದಾರೆ. ನನ್ನ ಹತ್ಯೆಗೆ ಸಂಚು ನಡೆಸಿದ್ದಾರೆ. 7-8 ಬಾರಿ ಫೈರಿಂಗ್ ಆಗಿದೆ. ನಿನ್ನೆ ಒಂದು ಗುಂಡು ಪತ್ತೆಯಾಗಿತ್ತು, ಇಂದು ಮತ್ತೊಂದು ಬುಲೆಟ್ ಕ್ಯಾಪ್ ಪತ್ತೆಯಾಗಿದೆ. ಜಾತಿ ನಿಂದನೆ, ಕೊಲೆ ಯತ್ನ ಆರೋಪದ ಅಡಿಯಲ್ಲಿ 15 ಜನರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.



