ಮಂಗಳೂರು (ದಕ್ಷಿಣ ಕನ್ನಡ): ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರದಿಂದ ಮಳೆಯಾಗುತ್ತಿದೆ. ಗುರುವಾರ ಮುಂಜಾನೆ ಆರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದೆ.
ಜಿಟಿಜಿಟಿ ಮಳೆ ಹೊರಾಂಗಣದಲ್ಲಿ ಆಯೋಜಿಸಿದ್ದ ಮದುವೆ, ಇನ್ನಿತರ ಸಭೆ ಸಮಾರಂಭಗಳಿಗೆ ಅಡ್ಡಿಯಾಗಿದೆ. ನಿನ್ನೆ ಕೂಡಾ ದಿನವಿಡೀ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇತ್ತು. ವಾಯುಭಾರ ಕುಸಿತ ಉಂಟಾಗಿದ್ದು, ಆಗ್ನೇಯ ಭಾಗದ ಅರಬ್ಬಿ ಸಮುದ್ರ ಮಟ್ಟದಿಂದ 5.8 ಕಿ.ಮೀ. ಎತ್ತರದಲ್ಲಿ ಸುಳಿಗಾಳಿ ಸೃಷ್ಟಿಯಾಗಿದೆ. ಇದರಿಂದಾಗಿ ನಿಮ್ನ ಒತ್ತಡ ನಿರ್ಮಾಣ ಆಗಿದೆ. ಪರಿಣಾಮ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಮಳೆಯಿಂದ ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಧಾರಣ ಮಳೆಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ 5 ದಿನಗಳಲ್ಲಿ ಕರ್ನಾಟಕ ರಾಜ್ಯದ ಹಲವೆಡೆ ಲಘು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಸಂಕಟ ತಂದಿದೆ. ಗ್ರಾಮೀಣ ಭಾಗದ ಕೃಷಿಕರ ಕೊಯಿಲಿನ ಅಡಿಕೆ ಅಂಗಳದಲ್ಲೇ ಇದ್ದು, ಅಡಿಕೆ ಮಳೆಗೆ ಒದ್ದೆಯಾಗಿದೆ. ಇದರಿಂದ ಅಡಿಕೆಯ ಗುಣಮಟ್ಟವೂ ಹಾಳಾಗಲಿದೆ. ಅಡಿಕೆ ಮರದಲ್ಲಿ ಹಿಂಗಾರವೂ ಬೆಳವಣಿಗೆ ಹಂತದಲ್ಲಿರುವುದರಿಂದ ಅಕಾಲಿಕ ಮಳೆ ಹಿಂಗಾರದ ಬೆಳವಣಿಗೆಗೂ ಕುತ್ತುತಂದಿದೆ. ಇನ್ನುಳಿದಂತೆ ಕಾಳುಮೆಣಸು ಬಳ್ಳಿಗೂ ಈ ಮಳೆ ಶುಭವಲ್ಲ ಅನ್ನೋದು ಕೃಷಿಕರ ಮಾತಾಗಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ
RELATED ARTICLES