ಬೆಂಗಳೂರು: ಬೆಂಗಳೂರು ನಗರದಲ್ಲಿ ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರು ತಮ್ಮ ಆಸ್ತಿಯನ್ನು ಎ ಖಾತೆಗೆ ಪರಿವರ್ತಿಸಿಕೊಳ್ಳಲು ಶೀಘ್ರದಲ್ಲೇ ಆನ್ಲೈನ್ ಸೇವೆ ಆರಂಭವಾಗಲಿದೆ. ಈ ಸಂಬಂಧ ಈಗಾಗಲೇ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅದನ್ನು ಅನುಸರಿಸಿ ಬಿಬಿಎಂಪಿ ಹೊಸ ಡಿಜಿಟಲ್ ವ್ಯವಸ್ಥೆ ತರಲು ಮುಂದಾಗಿದೆ.
ಮನೆಯಿಂದಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಮೂಲಕ, ಸಾರ್ವಜನಿಕರು ಖಾತಾ ವರ್ಗಾವಣೆಗೆ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಈ ವ್ಯವಸ್ಥೆ ಭೂಮಿ ಆಸ್ತಿಗೆ ಮಾತ್ರ ಅನ್ವಯವಾಗಲಿದೆ. ಅಕ್ರಮ ಕಟ್ಟಡಗಳಿಗೆ ಇದನ್ನು ಅನ್ವಯಿಸಲಾಗುವುದಿಲ್ಲ, ಏಕೆಂದರೆ ಅಕ್ರಮ ಸಕ್ರಮ ಯೋಜನೆಗೆ ಸುಪ್ರೀಂ ಕೋರ್ಟ್ ತಡೆ ಇದೆ.
ಎರಡು ವಾರದಲ್ಲಿ ಅರ್ಜಿ ಸಲ್ಲಿಕೆ ಶುರು
ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರ ಪ್ರಕಾರ, ಮುಂದಿನ ಎರಡು ವಾರಗಳಲ್ಲಿ ಡಿಜಿಟಲ್ ಸೇವೆ ಕಾರ್ಯಾರಂಭ ಮಾಡಲಿದೆ.
ಆರಂಭದಲ್ಲಿ, ಕಂದಾಯ ನಿವೇಶನಗಳು, ಕೃಷಿಯೇತರ ಉದ್ದೇಶಗಳಿಗಾಗಿ ಬಳಸಲಾಗುವ ಆದರೆ ಇನ್ನೂ ಸಂಪೂರ್ಣವಾಗಿ ದಾಖಲೆಗಳನ್ನು ಹೊಂದಿರದ ಭೂಮಿ ಆಸ್ತಿಯನ್ನು ಪರಿಗಣಿಸಲಾಗುವುದು. ಅಧಿಕೃತ ಅನುಮೋದನೆ ಇಲ್ಲದ ಲೇಔಟ್ಗಳಲ್ಲಿನ ಕೆಲವು ಪ್ಲಾಟ್ಗಳನ್ನು ಮಾತ್ರ ಪರಿಗಣಿಸಲಾಗುವುದು.
ನಾನ್ ಕಾಂಪ್ಲಿಯೆಂಟ್ (ಸಂಬಂಧಿತ ಕಟ್ಟಡ ನಿಯಮಗಳು, ಸಂಹಿತೆಗಳು ಅಥವಾ ಮಾನದಂಡಗಳ ಅವಶ್ಯಕತೆಗಳನ್ನು ಪೂರೈಸದ್ದು) ಕಟ್ಟಡಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಂತರ ಪರಿಹರಿಸಲಾಗುವುದು ಎಂದು ವರದಿ ಉಲ್ಲೇಖಿಸಿದೆ.