ಬೆಳಗಾವಿ: ಪರಿಹಾರ ನೀಡಲು ವಿಳಂಬ ಮಾಡಿರುವ ಹಿನ್ನೆಲೆ ರೈತರು ಎಸಿ ಕಚೇರಿ ವಸ್ತುಗಳನ್ನು ಜಪ್ತಿ ಮಾಡಿರುವ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದೆ.
ಡಿಸಿ ಕಚೇರಿ ಆವರಣದಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದಾರೆ. ಕಂಪ್ಯೂಟರ್, ಕುರ್ಚಿಗಳು, ಪ್ರಿಂಟರ್ ಸೇರಿದಂತೆ ವಿವಿಧ ವಸ್ತುಗಳನ್ನು ರೈತರು ಹೊತ್ತೊಯ್ದಿದ್ದಾರೆ.
2008ರಲ್ಲಿ ಬೆಳಗಾವಿ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿಗಾಗಿ ರೈತರು ತಮ್ಮ 270 ಎಕರೆ ಜಮೀನುಗಳನ್ನು ಕೊಟ್ಟಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಜಮೀನುಗಳನ್ನು ಕೊಟ್ಟಿದ್ದ ರೈತರಿಗೆ ಪ್ರತಿ ಎಕರೆಗೆ ಕೇವಲ 2 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರ ಆದೇಶಿಸಿತ್ತು.
2011ರಲ್ಲಿ ರೈತರು ಹೆಚ್ಚಿನ ಪರಿಹಾರ ಕೋರಿ ಕೋರ್ಟ್ ಮೊರೆಹೋಗಿದ್ದರು. ಬೆಳಗಾವಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ ನಂತರ ವಿಚಾರಣೆ ನಡೆಸಿ 2018 ರಲ್ಲಿಯೇ ಪ್ರತಿ ಗುಂಟೆಗೆ 40 ಸಾವಿರ ರೂ. ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಲಾಗಿತ್ತು. ಇದಾದ ಬಳಿಕ 2021ರಲ್ಲಿ ಸಕಾಲಕ್ಕೆ ಪರಿಹಾರ ಕೊಡದೇ ಇದ್ದಿದ್ದರಿಂದ ರೈತರು ಮತ್ತೆ ನ್ಯಾಯಾಲಯದ ಮೊರೆಹೋಗಿದ್ದಾರೆ. ಆಗ ರೈತರಿಗೆ ತಕ್ಷಣವೇ ನ್ಯಾಯಯುತ ಪರಿಹಾರ ನೀಡುವಂತೆ ಮತ್ತೊಮ್ಮೆ ಕೋರ್ಟ್ ಆದೇಶಿಸಿದೆ. ಆಗಲೂ ಪರಿಹಾರ ನೀಡದಿದ್ದರಿಂದ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ವಸ್ತು ಜಪ್ತಿ ಮಾಡುವಂತೆ ಕೋರ್ಟ್ ಸೂಚನೆ ನೀಡಿತ್ತು.
ಜಮೀನು ಕೊಟ್ಟಿದ್ದ 20 ರೈತರ 8 ಕೋಟಿ ರೂ. ಪರಿಹಾರ ಇನ್ನೂ ಬಾಕಿಯಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಎಸಿ ಕಚೇರಿ ಪೀಠೋಪಕರಣಗಳನ್ನು ರೈತರು ಜಪ್ತಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.