ಬೆಳಗಾವಿ: ಇಲ್ಲಿಯ ತಹಶೀಲ್ದಾರ ಕಚೇರಿಯ ಕೊಠಡಿಯಲ್ಲಿಯೇ ಎಸ್ ಡಿಎ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ (ನ.5) ನಡೆದಿದೆ.
ಏಕಾಏಕಿ ವರ್ಗಾವಣೆ ಮಾಡಿದ ಹಿನ್ನೆಲೆ, ತಹಶೀಲ್ದಾರ್ ಕಚೇರಿ ದ್ವೀತಿಯ ದರ್ಜೆ ಗುಮಾಸ್ತ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗಳು, ನಿನ್ನೆ ಬೆಳಗಾವಿ ತಹಶೀಲ್ದಾರ್ ಕಚೇರಿಯಿಂದ ಸವದತ್ತಿ ಎಲ್ಲಮ್ಮ ಆಡಳಿತ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು.
ವರ್ಗಾವಣೆ ರದ್ದುಗೊಳಿಸುವಂತೆ ತಹಶೀಲ್ದಾರ್ ಹಾಗೂ ಡಿಸಿ ಮೊಹಮ್ಮದ್ ರೋಷನ್ ಅವರಿಗೆ ರುದ್ರಣ್ಣ ಮನವಿ ಮಾಡಿದ್ದರು. ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಚೇರಿಗೂ ಹೋಗಿ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಪೋಸ್ಟ್ ಕೂಡ ಹಾಕಿದ್ದರು.
ನಾನು ಜೀವ ಕಳೆದುಕೊಂಡರೆ ಅದಕ್ಕೆ ತಹಶೀಲ್ದಾರ್ ಹಾಗೂ ಡಿಸಿ ಕಾರಣ ಎಂದು ಡಿಪಾರ್ಟ್ಮೆಂಟ್ ವಾಟ್ಸಪ್ನಲ್ಲಿ ಪೋಸ್ಟ್ ಮಾಡಿದ್ದರು. ಘಟನೆ ನಂತರ ಪೋಸ್ಟ್ ಡಿಲೀಟ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. ಸ್ಥಳಕ್ಕೆ ಡಿಸಿಪಿ ರೊಹಬ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.