ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಗಾಳಿ, ಮಳೆಯಿಂದ ಮರಗಳು ಹಾಗೂ ಕೊಂಬೆಗಳು ಬಿದ್ದು ಪ್ರಾಣಹಾನಿ ಹಾಗೂ ಆಸ್ತಿಹಾನಿ ಸಂಭವಿಸುತ್ತಿದ್ದು, ಇಂತಹ ಅಪಾಯಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯಾಧಿಕಾರಿಗಳಿಗೆ ಅಪಾಯಕಾರಿ ಮರಗಳ ಕೊಂಬೆಗಳನ್ನು ತಕ್ಷಣವೇ ಕತ್ತರಿಸಲು ಸೂಚನೆ ನೀಡಿದರು.
ಬೆಂಗಳೂರು ಕಂಟೋನ್ಮೆಂಟ್ ಪ್ರದೇಶದಲ್ಲಿ ಮರದ ಸುತ್ತಲಿನ ಕಾಂಕ್ರೀಟ್ ತೆರವು ಮಾಡುವ ಮೂಲಕ ವೃಕ್ಷ ಸಂರಕ್ಷಣಾ ಕಾರ್ಯಕ್ಕೆ ಶುಭಾರಂಭ ನೀಡಿದ ಖಂಡ್ರೆ, ತೀವ್ರ ಗಾಳಿಗೆ ಮರ ಧರಾಶಾಯಿಯಾಗಿದ್ದು, 29 ವರ್ಷದ ಅಕ್ಷಯ್ ಸಾವನ್ನಪ್ಪಿದ ಘಟನೆಗೆ ವಿಷಾದ ವ್ಯಕ್ತಪಡಿಸಿದರು.
ಟೊಳ್ಳು ಹಾಗೂ ಬೇರಿಗೆ ನೀರು ಹೋಗದಂತೆ ಮಾಡಿದ ಕಾಂಕ್ರೀಟ್, ಟೈಲ್ಸ್, ಕಲ್ಲಿನ ಚಪ್ಪಡಿಗಳು ಮರ ಕುಸಿತಕ್ಕೆ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಸಂಬಂಧ ತೀರ್ಪು ನೀಡಿದ್ದು, ಸರ್ಕಾರ ಕೂಡಾ ಆದೇಶ ಹೊರಡಿಸಿದೆ.
ರಸ್ತೆ ಬದಿಯಲ್ಲಿ ಗಿಡ ನೆಡುವಾಗ ಒಂದು ಮೀಟರ್ ಸುತ್ತ ಮಣ್ಣು ಇರಲಿ ಎಂಬ ಸೂಚನೆ ನೀಡಿದ್ದು, ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು ಮರದ ಸುತ್ತಲಿನ ಕಾಂಕ್ರೀಟ್ ತೆರವಿಗೆ ಕ್ರಮ ವಹಿಸಬೇಕು.
ಒಬ್ಬ ಮನುಷ್ಯ ನೆಮ್ಮದಿಯಿಂದ ಉಸಿರಾಡಲು 7 ಮರ ಇರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಇಂದು ಬೆಂಗಳೂರು ಕಾಂಕ್ರೀಟ್ ಕಾಡಾಗಿದ್ದು, ಇಲ್ಲಿ 7 ಜನರಿಗೆ ಕನಿಷ್ಠ 1 ಮರವೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ವೃಕ್ಷ ಸಂರಕ್ಷಣೆ ಮತ್ತು ಸಂವರ್ಧನೆಗೆ ಮುಂದಾಗಬೇಕು ಎಂದು ಖಂಡ್ರೆ ಹೇಳಿದರು.