ಬೆಂಗಳೂರು : ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.
ಸ್ನೇಹಮಯಿ ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳ ವಿರುದ್ಧ ನಿರ್ಲಕ್ಷ್ಯಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 106 ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ವಿಷಯ :- ಜನಪ್ರಿಯ ಪ್ರಚಾರದ ರಾಜಕೀಯ ಲಾಭದ ಕಾರಣಕ್ಕಾಗಿ ಆರ್.ಸಿ.ಬಿ.ತಂಡದ ಆಟಗಾರರನ್ನು ವಿಧಾನಸೌಧದ ಮುಂಭಾಗ ಸನ್ಮಾನ ಮಾಡುವ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸುವ ದುಡುಕಿನ ನಿರ್ಧಾರ ಕೈಗೊಂಡು, ಸೂಕ್ತ ಭದ್ರತೆಯ ನಿರ್ಲಕ್ಷ್ಯವನ್ನು ತೋರಿಸಿ, ಸುಮಾರು 11 ಜನರ ಸಾವು ಸಂಭವಿಸಲು, 30 ಜನರಿಗಿಂತಲೂ ಹೆಚ್ಚಿನ ಜನರು ಗಾಯಗೊಳ್ಳಲು ಕಾರಣರಾಗಿರುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು ಹಾಗೂ ಇತರರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಕಲಂ 106 ರ ಪ್ರಕಾರ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಮನವಿ.
ಮಾನ್ಯರೆ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ದಿನಾಂಕ :-03.06.2025 ರಂದು ಗುಜರಾತಿನ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ ಅಂತಿಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್.ಸಿ.ಬಿ.ತಂಡವು ಗೆಲವು ಸಾಧಿಸಿದ್ದರಿಂದ, ಲಕ್ಷಾಂತರ ಕ್ರೀಡಾಭಿಮಾನಿಗಳು ಮಧ್ಯರಾತ್ರಿಯಲ್ಲಿ ಸಂಭ್ರಮಾಚರಣೆಯನ್ನು ಮಾಡಿರುತ್ತಾರೆ. ಜನರ ಈ ಕ್ರೀಡಾಭಿಮಾನವನ್ನು, ಜನಪ್ರಯತೆಯನ್ನು ತಮ್ಮ ರಾಜಕೀಯ ಲಾಭವನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ರವರು ಆರ್.ಸಿ.ಬಿ.ತಂಡದ ಆಟಗಾರರನ್ನು ಸರ್ಕಾರದ ವತಿಯಿಂದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನಿಸುವ ದಿಡೀರ್ (ದುಡುಕಿನ) ನಿರ್ಧಾರ ಕೈಗೊಂಡಿದ್ದು, ಇದೇ ರೀತಿ ಕರ್ನಾಟಕ ರಾಜ್ಯ ಕ್ರಿಕೇಟ್ ಮಂಡಳಿಯವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆ ಮಾಡಲು ನಿರ್ಧಾರ ಕೈಗೊಂಡಿದ್ದರಿಂದ ಹಾಗೂ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದ್ದರೂ, ಅವರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದ ಲಕ್ಷಾಂತರ ಜನರ ನೂಕು ನುಗ್ಗಲಿನಲ್ಲಿ ಇದುವರೆವಿಗೂ 11 ಜನರು ಸಾವಿನಪ್ಪಿದ್ದು, 30 ಜನರಿಗಿಂತಲೂ ಹೆಚ್ಚಿನ ಜನರ ಗಾಯಗೊಂಡಿರುತ್ತಾರೆ ಎಂಬುದು ಮಾದ್ಯಮಗಳಿಂದ ನನಗೆ ತಿಳಿದುಬಂದಿರುತ್ತದೆ. ನನಗೆ ಬಂದಿರುವ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳ ಹಾಗೂ ಇತರರ ದುಡುಕಿನ ನಿರ್ಧಾರ ಮತ್ತು ನಿರ್ಲಕ್ಷ್ಯ ಧೋರಣೆಯೇ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ. ಅಂದರೆ ಇವರುಗಳ ದುಡುಕಿನ ನಿರ್ಧಾರ ಮತ್ತು ನಿರ್ಲಕ್ಷ್ಯ ಧೋರಣೆಯಿಂದ 11 ಜನರು ಸಾವಿನಪ್ಪಿದ್ದು, 30 ಜನರಿಗಿಂತಲೂ ಹೆಚ್ಚಿನ ಜನರು ಕ್ರೀಡಾಭಿಮಾನಿಗಳ ಸಂಭ್ರಮದ ಪರಾಕಾಷ್ಠೆ ಹೆಚ್ಚಿರುವ ಸಮಯದಲ್ಲೇ ಕಾರ್ಯಕ್ರಮ ನಡೆಸಲು, ಹಿರಿಯ ಪೊಲೀಸ್ ಅಧಿಕಾರಿಗಳು ಎರಡು ಕಡೆ ಕಾರ್ಯಕ್ರಮ ಆಯೋಜನೆ ಮಾಡಿದರೆ, ಪೊಲೀಸ್ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರೂ ಕೂಡ ದುಡುಕಿನ ನಿರ್ಧಾರ ಕೈಗೊಂಡಿರುತ್ತಾರೆ, ಕಾರ್ಯಕ್ರಮಗಳಿಗೆ ಸೇರುವ ಕ್ರೀಡಾಭಿಮಾನಿಗಳ ರಕ್ಷಣೆಯ ಬಗ್ಗೆ ನಿರ್ಲಕ್ಷ್ಯವನ್ನು ತೋರಿಸಿ, ಈ ದುರಂತಕ್ಕೆ ಕಾರಣರಾಗಿರುತ್ತಾರೆ. ಆದ್ದರಿಂದ.
- ಆರ್.ಸಿ.ಬಿ.ತಂಡವು ಕರ್ನಾಟಕ ಸರ್ಕಾರದ ಅಥವಾ ಕರ್ನಾಟಕ ರಾಜ್ಯ ಕ್ರಿಕಿಟ್ ಮಂಡಳಿಯ ಅಥವಾ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಅಧೀಕೃತ ತಂಡವಾಗಿರುತ್ತದೆಯೆ ? ಅಥವಾ ಮಧ್ಯ ತಯಾರಿಕ ಸಂಸ್ಥೆಯು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿದ ಆಟಗಾರರನ್ನು ಒಳಗೊಂಡ ಖಾಸಾಗಿ ತಂಡವಾಗಿ ರುತ್ತದೆಯೆ ?
- ಆರ್.ಸಿ.ಬಿ.ತಂಡದಲ್ಲಿ ಕನ್ನಡಿಗ ಅಥವಾ ಕರ್ನಾಟಕದ ಎಷ್ಟು ಜನ ಆಟಗಾರರು ಇದ್ದಾರೆ ? ಸದರಿ ಆಟಗಾರರು ಧರಿಸಿದ ಸಮವಸ್ತ್ರದಲ್ಲಿ ಕರ್ನಾಟಕ/ಕನ್ನಡವನ್ನು ನೆನಪಿಸುವ ಯಾವುದಾದರೂ ಗುರುತು/ಪದ ಇತ್ತೆ ?
- ಖಾಸಾಗಿ ಸಂಸ್ಥೆಯ ಖಾಸಾಗಿ ತಂಡವು ಅಂತಿಮ ಪಂದ್ಯದಲ್ಲಿ ಜಯಗಳಿಸಿದ ಮಾತ್ರಕ್ಕೆ ಕರ್ನಾಟಕ ಸರ್ಕಾರ ಸದರಿ ಖಾಸಾಗಿ ತಂಡದ ಆಟಗಾರರನ್ನು ಅಧೀಕೃತವಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಮಾಡುವ ಅವಶ್ಯಕತೆ ಇತ್ತೆ ?
- ಯಾವ ಕಾರಣಕ್ಕಾಗಿ ಈ ಸನ್ಮಾನ ಕಾರ್ಯಕ್ರಮವನ್ನು ಸರ್ಕಾರದಿಂದ ಆಯೋಜನೆ ಮಾಡಲಾಗಿತ್ತು ?
- ಈ ರೀತಿ ಖಾಸಾಗಿ ತಂಡದ ಆಟಗಾರರನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಮಾಡಲು ಸರ್ಕಾರಕ್ಕೆ ಯಾವ ಕಾನೂನಿನಲ್ಲಿ ಅವಕಾಶ ಇದೆ ? ಇದೇ ರೀತಿ ಇದುವರೆವಿಗೂ ಬೇರೆ ಖಾಸಾಗಿ ಸಂಸ್ಥೆಯ ತಂಡವನ್ನು ಅಥವಾ ವ್ಯಕ್ತಿಯನ್ನು ಸನ್ಮಾನ ಮಾಡಲಾಗಿದೆ ?
- ಆರ್.ಸಿ.ಬಿ.ತಂಡದ ಆಟಗಾರರನ್ನು ಬರ ಮಾಡಿಕೊಳ್ಳಲು ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ವಿಮಾನ ನಿಲ್ದಾಣಕ್ಕೆ, ಸರ್ಕಾರದ ಅಧೀಕೃತ ವಾಹನದಲ್ಲಿ ಹೋಗಿದ್ದು ಏಕೆ ? ಈ ರೀತಿ ಖಾಸಾಗಿ ತಂಡದ ಆಟಗಾರರನ್ನು ಬರಮಾಡಿಕೊಳ್ಳಲು ಸರ್ಕಾರದ ವಾಹನಗಳನ್ನು ಬಳಸಿಕೊಂಡು, ವಿಮಾನ ನಿಲ್ದಾಣಕ್ಕೆ ಹೋಗಿರುವುದು ಕಾನೂನು ಬಾಹಿರವಲ್ಲವೆ ? ಇದೇ ಆಸಕ್ತಿಯನ್ನು ಕರ್ನಾಟಕ/ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ ಬೇರೆ ಸಾಧಕರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗಲಾಗಿತ್ತೆ ? ಮತ್ತು ಸರ್ಕಾರದಿಂದ ಸನ್ಮಾನ ಮಾಡಲಾಗಿತ್ತೆ ? ಉದಾಹರಣೆಗೆ ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ನಟ ಶ್ರೀ ಅನಂತನಾಗ್ರವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಏಕೆ ಹೋಗಲಿಲ್ಲ ? ಶ್ರೀ ಅನಂತನಾಗ್ರವರನ್ನು ಸರ್ಕಾರದಿಂದ ಅಧೀಕೃತವಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಏಕೆ ಸನ್ಮಾನ ಮಾಡಲಿಲ್ಲ ? ಈ ಅಂಶವನ್ನು ವಿಶ್ಲೇಷಣೆ ನಡೆಸಿದಾಗ, ಆರ್.ಸಿ.ಬಿ.ತಂಡದ ಗೆಲುವಿನ ಜನಪ್ರಿಯತೆಯನ್ನು ತಮ್ಮ ರಾಜಕೀಯ ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ರವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಈ ಸನ್ಮಾನ ಕಾರ್ಯಕ್ರಮ ಮಾಡುವ ಮೂಲಕ, ಜನರ ಸಾವಿಗೆ, ನೋವಿಗೆ ಕಾರಣರಾಗಿರು ವುದು ಖಚಿತವಾಗುತ್ತದೆಯಲ್ಲವೆ ?
- ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯು, ಮಧ್ಯ ತಯಾರಿಕ ಸಂಸ್ಥೆಯ, ಖಾಸಾಗಿ ತಂಡದ ವಿಜಯೋತ್ಸವ ಆಚರಿಸುವ ಅವಶ್ಯಕತೆ ಇದೆಯೆ ? ಕರ್ನಾಟಕವನ್ನು ಪ್ರತಿನಿಧಿಸುವ ಇತರೆ ಕ್ರಿಕೆಟ್ ಸಾಧಕರ ಸಾಧನೆಯ ಗಾಯಗೊಳ್ಳುವಂತಾಗಿದೆ. ಹೀಗಾಗಿ ಇವರುಗಳು ಭಾರತೀಯ ನ್ಯಾಯ ಸಂಹಿತೆಯ ಕಲಂ 106 ರ ಪ್ರಕಾರ ಅಪರಾಧ ಕೃತ್ಯ ಮಾಡಿದಂತೆ ಆಗಿರುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿದೆ.
ಈ ಕೆಳಕಂಡ ಅಂಶಗಳನ್ನು ಗಮನಿಸಿದಾಗ ಮತ್ತು ಈ ಅಂಶಗಳನ್ನು ಆಧರಿಸಿ, ತನಿಖೆಯನ್ನು ನಡೆಸಿದಾಗ ಮೇಲ್ಕಂಡಂತೆ ನಾನು ಮಾಡಿರುವ ಆರೋಪ ನಿಜ ಎಂಬುದು ಖಚಿತವಾಗುತ್ತದೆ,
1] ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಮುಗಿದಾಗ ಮಧ್ಯರಾತ್ರಿಗೂ ಹೆಚ್ಚಿನ ಸಮಯವಾಗಿತ್ತು. ಅಂದರೆ ದಿನಾಂಕ :-04.05.2025 ರ ಬೆಳಗಿನ ಜಾವದವರೆಗೂ ಆಟಗಾರರು ಕ್ರೀಡಾಂಗಣದಲ್ಲಿದ್ದರು. ಹೀಗಾಗಿ ಆಟಗಾರರು ಒಂದು ದಿನ ವಿಶ್ರಾಂತಿ ಪಡೆಯಲು ಅವಕಾಶ ಕೊಡದೆ, ಅದೇ ದಿನ ಅವರನ್ನು ಬೆಂಗಳೂರಿನಲ್ಲಿ ಸರ್ಕಾರದಿಂದ ಸನ್ಮಾನಿಸುವ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೇಟ್ ಮಂಡಳಿಯಿಂದ ವಿಜಯೋತ್ಸವ ಆಚರಿಸುವ ದುಡುಕಿನ ನಿರ್ಧಾರ ಕೈಗೊಳ್ಳಲಾಗಿದೆ.
2] ಸದರಿ ಆರ್.ಸಿ.ಬಿ.ತಂಡವು ಕರ್ನಾಟಕ ಸರ್ಕಾರವನ್ನು, ಕರ್ನಾಟಕ ರಾಜ್ಯವನ್ನು ಅಧೀಕೃತವಾಗಿ ಪ್ರತಿನಿಧಿ ಸುವ ತಂಡವಾಗಿರುವುದಿಲ್ಲ, ಮಧ್ಯ ತಯಾರಿಕೆಯ ಸಂಸ್ಥೆಯು ಆಟಗಾರರನ್ನು ಹರಾಜಿನ ಮೂಲಕ ಖರೀದಿಸಿ, ರಚನೆ ಮಾಡಿದ ಖಾಸಾಗಿ ತಂಡವಾಗಿದೆ. ಕೊನೆ ಪಕ್ಷ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯಿಂದ ಅಧೀಕೃತವಾಗಿ ಆಯ್ಕೆಗೊಂಡ ಆಟಗಾರರನ್ನು ಒಳಗೊಂಡ ತಂಡವೂ ಆಗಿರಲಿಲ್ಲ. ಸದರಿ ತಂಡದ ಆಟಗಾರರು ಧರಿಸಿದ ಸಮವಸ್ತ್ರದಲ್ಲಿ ಕರ್ನಾಟಕ ಅಥವಾ ಕನ್ನಡವನ್ನು ಪ್ರತಿನಿಧಿಸುವ ಯಾವುದೇ ಒಂದು ಪದವಾಗಲಿ, ಗುರುತಾಗಲಿ ಇರುವುದಿಲ್ಲ.
3] ಆರ್.ಸಿ.ಬಿ.ಅಂದರೆ, “ರಾಯಲ್ ಚಾಲೆಂಜರ್ಸ್ ಬೆಂಗಳೂರು” ಎಂಬುದಾಗಿರುತ್ತದೆ. ರಾಯಲ್ ಚಾಲೆಂಜರ್ ಎಂಬುದು ಒಂದು ಮಧ್ಯದ ಹೆಸರಾಗಿದೆಯೇ ಹೊರತು, ಕರ್ನಾಟಕದ, ಕನ್ನಡದ ಪ್ರತೀಕವಾದಂತಹ ಯಾವುದೇ ಹೆಸರಾಗಿರುವುದಿಲ್ಲ. ಸದರಿ ರಾಯಲ್ ಚಾಲೇಂರ್ಜ ಹೆಸರಿನ ಮಧ್ಯವನ್ನು ತಯಾರಿಸುವ ಸಂಸ್ಥೆಯು ಬೆಂಗಳೂರಿನಲ್ಲಿ ಇರುವುದರಿಂದ, ರಾಯಲ್ ಚಾಲೆಂಜರ್ಸ್ ಹೆಸರಿನ ಜೊತೆ ಬೆಂಗಳೂರು ಹೆಸರನ್ನು ಸೇರಿಸಿಕೊಳ್ಳಲಾಗಿರುತ್ತದೆ. ಜನ ಸಾಮಾನ್ಯರು ಆರ್.ಸಿ.ಬಿ.ತಂಡವನ್ನು ತಮ್ಮ ತಂಡ ಎಂದುಕೊಂಡು, ಕ್ರೀಡಾಭಿಮಾನ ತೋರಿಸುವುದು, ಸಂಭ್ರಮಾಚರಣೆ ಮಾಡುವುದು ಅವರ ವೈಯಕ್ತಿಕ ವಿಚಾರವಾಗಿರುತ್ತದೆಯೇ ಹೊರತು, ಸದರಿ ತಂಡ ಕರ್ನಾಟಕದ ಅಧೀಕೃತ ತಂಡ ಎಂದುಕೊಂಡು, ಸದರಿ ಖಾಸಾಗಿ ತಂಡದ ವಿಜಯವನ್ನು, ಕರ್ನಾಟಕದ ವಿಜಯ ಎಂದುಕೊಂಡು ಸರ್ಕಾರ ಅಧೀಕೃತವಾಗಿ ಪ್ರೋತ್ಸಾಹಿಸುವ, ಸನ್ಮಾನ ಮಾಡುವ ವಿಚಾರವಾಗಿರುವುದಿಲ್ಲ. ಅದೇ ರೀತಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯು ಸಹ ಸದರಿ ಖಾಸಾಗಿ ತಂಡದ ಗೆಲುವನ್ನು ಅಧೀಕೃತವಾಗಿ ಸಂಭ್ರಮಾಚರಣೆ ಮಾಡಲು, ಮಂಡಳಿಯ ಹಣವನ್ನು ಉಪಯೋಗಿಸಿ, ಕಾರ್ಯಕ್ರಮ ಆಯೋಜಿಸಿರುವುದು ಸಹ ಸೂಕ್ತ ನಿರ್ಧಾರವಲ್ಲ.


