ಬೆಂಗಳೂರು: ಇಂದು ನಗರದ ಹಲವೆಡೆ ಬಿರುಗಾಳಿ ಸಮೇತ ಮಳೆ ಶುರುವಾಗಿದೆ. ಮುಂದಿನ 3 ಗಂಟೆಗಳಲ್ಲಿ ಮಳೆ ಸಾಧ್ಯತೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ಬೆನ್ನಲ್ಲೇ ಇದೀಗ ನಗರದ ಚಾಲುಕ್ಯ ಸರ್ಕಲ್, ಪ್ಯಾಲೇಸ್ ರಸ್ತೆ ಸೇರಿ ಹಲವೆಡೆ ಆಲಿಕಲ್ಲು ಜೊತೆಗೆ ಮಳೆರಾಯ ಆರ್ಭಟಿಸಿದ್ದಾನೆ. ಬರ ಆವರಿಸಿದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಲಿಕಲ್ಲು ಮಳೆಯಾಗಿದೆ. ಇಂದು ಮಳೆ ಜೊತೆಗೆ ಗಾಳಿಯ ಪ್ರಮಾಣ ಕೂಡ ಜಾಸ್ತಿ ಇದೆ. ಬಿಸಿಲಿನಿಂದ ಬಸವಳಿದಿದ್ದ ರಾಜಧಾನಿಗೆ ವರುಣ ಮತ್ತೊಮ್ಮೆ ಎಂಟ್ರಿ ಕೊಡುವ ಮೂಲಕ ತಂಪೆರೆದಿದ್ದಾನೆ.
ಇಂದು ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿವೆ. ಮಂತ್ರಿಮಾಲ್ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ನೀರು ಹೋಗಲು ಸ್ಥಳವಕಾಶ ಇಲ್ಲದೆ ಸುಮಾರು 2 ಅಡಿಯಷ್ಟು ತುಂಬಿಕೊಂಡಿದೆ. ಸದ್ಯ ಮಂತ್ರಿಮಾಲ್ ಬಳಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರಿಗೆ ಸಂಚರಿಸಲು ಸಮಸ್ಯೆ ಉಂಟಾಗಿದೆ.
ಎಲ್ಲೆಲ್ಲಿ ಮಳೆ?
ಚಾಲುಕ್ಯ ಸರ್ಕಲ್, ಪ್ಯಾಲೇಸ್ ರಸ್ತೆ ಸುತ್ತಮುತ್ತ, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೆಆರ್ ಮಾರ್ಕೆಟ್, ಕಾರ್ಪೊರೇಷನ್, ರಾಜಾಜಿನಗರ, ಮೆಜೆಸ್ಟಿಕ್, ರೇಸ್ ಕೋರ್ಸ್, ಕಾರ್ಪೋರೇಷನ್, ಮಹಾಲಕ್ಷ್ಮಿಲೇಔಟ್, ಬಸವೇಶ್ವರನಗರ, ಸದಾಶಿವನಗರ, ಬ್ಯಾಟರಾಯನಪುರ ಮತ್ತು ಮತ್ತಿಕೆರೆ, ಪದ್ಮನಾಭನಗರ, ಬನಶಂಕರಿ ಎರಡನೇ ಹಂತ, ಕಾಮಾಕ್ಯ, ಕತ್ರಗುಪ್ಪೆ, ಕದರೇನ ಹಳ್ಳಿ, ಚಿಕ್ಕಲು ಸಂದ್ರ ಭಾಗದಲ್ಲಿ ಜೋರು ಗಾಳಿ ಸಹಿತ ವರುಣ ದೇವ ಅಬ್ಬರಿಸುತ್ತಿದ್ದಾನೆ.
20 ಕ್ಕೂ ಹೆಚ್ಚು ಭಾಗದಲ್ಲಿ ಧರೆಗುರುಳಿದ ಮರಗಳು
ಆಲಿಕಲ್ಲು ಮಳೆ ಹಿನ್ನಲೆ ನಗರದಲ್ಲಿ ಕೆಲ ಅವಾಂತರಗಳು ಕೂಡ ಸಂಭವಿಸಿವೆ. ಅರ್ಧಗಂಟೆ ಬಂದ ಮಳೆಗೆ ನಗರದಲ್ಲಿ 20 ಕ್ಕೂ ಹೆಚ್ಚು ಭಾಗದಲ್ಲಿ ಮರಗಳು ಧರೆಗುರುಳಿವೆ. ಜಯನಗರ, ಬಸವನಗುಡಿ, ಮಲ್ಲೆಶ್ವರಂ, ಕೋರಮಂಗಲ, ಬಿಟಿಎಂ ಲೇಔಟ್, ಯಶವಂತರಪುರ ಸೇರದಿಂತೆ ಹಲವೆಡೆ ಮರಗಳು ಧರೆಗೆ ಉರುಳಿದ್ದು ದೂರು ಬಂದ ನಗರಗಳಲ್ಲಿ ಬಿಬಿಎಂಪಿ ಸಿಬ್ಬಂದಿಗಳು ಮರಗಳನ್ನು ತೆರೆವುಗೊಳಿಸುತ್ತಿರುವುದಾಗಿ ಬಿಬಿಎಂಪಿ ಕಂಟ್ರೋಲ್ ರೂಮ್ ಇಂದ ಮಾಹಿತಿ ನೀಡಲಾಗಿದೆ.