ಮೈಮುಲ್ ನಲ್ಲಿ ೧೨೦ ಕೋಟಿ ವೆಚ್ಚದಲ್ಲಿ ಶೇಖರಣಾ ಘಟಕ ನಿರ್ಮಾಣ
ಹೊಸೂರು : ಮೈಮುಲ್ ನಲ್ಲಿ ೧೦ ಲಕ್ಷ ಲೀಟರ್ ಹಾಲನ್ನು ೬ ತಿಂಗಳ ಅವದಿ ಶೇಖರಣೆ ಮಾಡಲು ಅಂದಾಜು ೧೨೦ ಕೋಟಿ ವೆಚ್ಚದಲ್ಲಿ ಶೇಖರಣಾ ಘಟಕ ನಿರ್ಮಾಣ ಮಾಡಲಾಗುವುದು ಎಂದು ಮೈಮುಲ್ ನಿರ್ಧೆಶಕ ಎ.ಟಿ.ಸೋಮಶೇಖರ್ ತಿಳಿಸಿದರು. ಭೇರ್ಯ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮೈಮುಲ್ ಹಾಲಿಗೆ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಬಾರಿ ಬೇಡಿಕೆಯಿದ್ದು, ಅಂದಾಜು ೧೦ ಲಕ್ಷ ಲೀಟರ್ ಹಾಲನ್ನು ಶೇಖರಿಸಿ ನಂತರ ಟೆಟ್ರೋ ಪ್ಯಾಕ್ ಮೂಲಕ ಮಾರಾಟದ ವ್ಯವಸ್ಥೆ ಮಾಡಲು ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಿದ್ದು, ಮುಂದಿನ ತಿಂಗಳೊಳಗೆ ಮೈಸೂರಿನಲ್ಲಿ ೧೨೦ ಕೋಟಿ ವೆಚ್ಚದ ಘಟಕದ ಸ್ಥಾಪನೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆಗಮಿಸಿ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಮನೆಗೊಂದು ಮರ, ಊರಿಗೊಂದು ವನ ಹಿರಿಯರ ಮಾತಿನಂತೆ ಪ್ರಸ್ತುತ ಹಳ್ಳಿಗಳಲ್ಲಿ ಮನೆಗೊಂದು ಹಸು ಸಾಕುತ್ತಿದ್ದು ಹೈನುಗಾರಿಕೆ ದೊಡ್ಡ ಉದ್ಯಮವಾಗಿ ಬೆಳದಿದೆ ಎಂದ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಹೈನುಗಾರಿಕೆ ಕೆಲವರಿಗೆ ಕಸುಬಾಗಿದ್ದು ಆರ್ಥಿಕ ಪರಿಸ್ಥಿತಿ ಬಹಳಷ್ಟು ಚೆನ್ನಾಗಿದೆ, ಸಾಕಷ್ಟು ಕುಟುಂಬಗಳು ಹೈನುಗಾರಿಕೆಯಿಂದ ನೆಮ್ಮದಿಯ ಜೀವನ ಸಾಗಿಸುತ್ತಿವೆ ಎಂದರು.
ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ,ಸಂಘದ ಅಭಿವೃದ್ಧಿಗೆ ಶ್ರಮಿಸಿ, ಸಂಘ ನಿಮಗೆ ಎಟಿಎಂ ಕಾರ್ಡ್ ಇದ್ದಹಾಗೆ ಯಾವಾಗ ಬೇಕಾದರು ಹಣ ಪಡೆಯ ಬಹುದು, ಪ್ರತಿ ಹದಿನೈದು ದಿನಕ್ಕೊಮ್ಮೆ ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಹಣವನ್ನು ಖಾತೆ ಜಮಾ ಮಾಡಲಾಗುತ್ತಿದೆ, ಮೈಮುಲ್ ವತಿಯಿಂದ ಹಾಲು ಉತ್ಪಾದಕರಿಗೆ ಮೇವು ಕಟಾವು ಯಂತ್ರ, ಮ್ಯಾಟ್, ಪಶು ಆಹಾರ, ಸಕಾಲದಲ್ಲಿ ವಿಮೆ ಸೇರಿದಂತೆ ಅನೇಕ ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಭೇರ್ಯ ಹಾಲು ಉತ್ಪಾದಕರ ಸಹಕಾರ ಸಂಘ ೨.೧೬ ಕೋಟಿ ವಹಿವಾಟು ನಡೆಸುವ ಮೂಲಕ ೫ ಲಕ್ಷದಷ್ಟು ನಿವ್ವಳ ಲಾಭಾಂಶ ಬಂದಿದೆ, ನಿಮ್ಮಗಳ ಸಹಕಾರ ಸದಾ ಇರಲಿ ಎಂದು ಮನವಿ ಮಾಡಿದರು.
ನಂತರ ಡೈರಿಗೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಮೂವರಿಗೆ ಸಂಘದಿಂದ ಉಡುಗೊರೆ ನೀಡಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಮಕ್ಸೂದ್ ಅಲಿಖಾನ್, ಉಪಾಧ್ಯಕ್ಷ ಬಿ.ಆರ್.ಪುಟ್ಟಸ್ವಾಮೀಗೌಡ, ಮೈಮುಲ್ ನಿವೃತ್ತ ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ಮೈಮುಲ್ ಉಪ ವ್ಯವಸ್ಥಾಪಕ ಡಾ.ಪ್ರವೀಣ್ ಪತ್ತರ್, ಪಶುವೈದ್ಯಾಧಿಕಾರಿ ಡಾ.ಹರೀಶ್, ಮೈಮುಲ್ ಮಾರ್ಗ ವಿಸ್ತರಣಾಧಿಕಾರಿ ಸುಮಂತ್, ನಿರ್ದೇಶಕರಾದ ಬಿ.ಎಸ್.ಗಣೇಶ್, ರಾಮನಾಯಕ, ಬಿ.ಎಂ.ಜಯಪ್ರಕಾಶ್, ಬಿ.ಆರ್.ಕುಮಾರ್, ರಾಜಯ್ಯ, ಬಿ.ಪಿ.ರಾಮಕೃಷ್ಣ, ಕಮಲಮ್ಮ, ಕಾಳಮ್ಮ, ಮಾಜಿ ಅಧ್ಯಕ್ಷ ಬೋರಪ್ಪನಾಯಕ, ಮಾಜಿ ನಿರ್ದೇಶಕರಾದ ಬಿ.ಟಿ.ನಾಗೇಂದ್ರ, ಶಿವಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ.ಪಿ.ಲೋಕೇಶ್, ಸಿಬ್ಬಂದಿಗಳಾದ ಬಿ.ಎ.ಕೌಶಿಕ್, ಪ್ರಸನ್ನ,ಕುಮಾರ್, ಪ್ರಜ್ವಲ್ ಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದ್ದರು.