ಬೀದರ್ : ಎನ್ಎ ನಿವೇಶನಗಳ ಮಾರಾಟದ ಅನುಮೋದನೆಗಾಗಿ ರಿಯಲ್ ಎಸ್ಟೇಟ್ ಉದ್ಯಮಿಯಿಂದ 10 ಲಕ್ಷ ರೂ. ಲಂಚ ಸ್ವೀಕಾರ ಹಿನ್ನಲೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಆಯಕ್ತ ಮತ್ತು ಯೋಜನಾ ಸದಸ್ಯ ಸೇರಿದಂತೆ ಮೂವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ(ನ22) ಪ್ರತಾಪ ನಗರದಲ್ಲಿ ನಡೆದಿದೆ.
ನಗರದ ಗುಂಪಾ ನಿವಾಸಿಯಾಗಿರುವ ಸತೀಶ ನೌಬಾದೆ ಎಂಬುವರು ಚಿಕ್ಕಪೇಟ್ ಗ್ರಾಮದಲ್ಲಿ 2.11 ಎಕರೆ ಭೂಮಿಗೆ 2022 ರಲ್ಲಿ ವಸತಿ ಉದ್ದೇಶಕ್ಕಾಗಿ ವಿನ್ಯಾಸ ಮಂಜೂರಾತಿ ಆದೇಶ ಪಡೆದುಕೊಂಡಿದ್ದು, ನಿಯಮದಂತೆ ಆರಂಭಿಕ ಹಂತದಲ್ಲಿ ಶೇ.40 ರಷ್ಟು ಅನುಪಾತದ ನಿವೇಶನಗಳನ್ನು ಬಿಡುಗಡೆ ಮಾಡಲಾಗಿತ್ತು. ಉಳಿದ ಶೇ. 60ರಷ್ಟು ನಿವೇಶನಗಳ ಬಿಡುಗಡೆಗಾಗಿ ಬುಡಾ ಆಯುಕ್ತ ಶ್ರೀಕಾಂತ ಚಿಮಕೋಡೆ, ಯೋಜನಾ ಸದಸ್ಯ ಚಂದ್ರಕಾಂತ ರೆಡ್ಡಿ50 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇದರಿಂದ ನೊಂದಿದ್ದ ಸತೀಶ್ ನ. 22 ರಂದು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸತೀಶ ಅವರು ಶುಕ್ರವಾರ ಮುಂಗಡವಾಗಿ 10 ಲಕ್ಷ ರೂ. ನೀಡಲು ಬುಡಾ ಕಚೇರಿಗೆ ಹೋದಾಗ ಆಯುಕ್ತರು, ತಮ್ಮ ಪರಿಚಯದ ಸಿದ್ದೇಶ್ವರ ಎಂಬುವರ ಕೈಯಲ್ಲಿ ಕೊಡಲು ತಿಳಿಸಿದ್ದಾರೆ. ಅದರಂತೆ ಸಿದ್ದೇಶ್ವರ ಹಣ ಪಡೆಯುವಾಗ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಸಿಪಿಐಗಳಾದ ಸಂತೋಷ ರಾಠೋಡ, ಬಾಬಾ ಸಾಹೇಬ್ ಪಾಟೀಲ, ಅರ್ಜುನಪ್ಪ, ಸಿಬ್ಬಂದಿಗಳಾದ ವಿಷ್ಣುರೆಡ್ಡಿ, ಶ್ರೀಕಾಂತ, ಶಾಂತಲಿಂಗಪ್ಪ, ವಿಜಯಶೇಖರ, ಅಡೆಪ್ಪ, ಕಿಶೋರಕುಮಾರ, ಭರತ, ಶುಕ್ಲೋಧನ ಮತ್ತು ಸುವರ್ಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.